ಬಾಗಲಕೋಟೆ: ಕಾಣೆಯಾದ ಮಹಿಳೆ ರುಂಡ, ಕೈ, ಕಾಲು ಕತ್ತರಿಸಿದ ಭೀಕರ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿರುವ ಘಟನೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ನಡೆದಿದೆ. ರುಂಡ, ಕೈ, ಕಾಲು ಕತ್ತರಿಸಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಮೀಜಾ ಅಲಾಸ (45) ಕೊಲೆಯಾದ ಮಹಿಳೆ. ಈಕೆ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ನಿವಾಸಿ. ಸದ್ಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ತೋಟದ ಮನೆಯೊಂದರಲ್ಲಿ ವಾಸವಿದ್ದರು.
ಜುಲೈ 16 ರಂದು ಹೊಲಕ್ಕೆ ಮೇವು ತರಲು ಹೋದವಳು ವಾಪಸ್ ಬಂದಿರಲಿಲ್ಲ ಎನ್ನಲಾಗಿದೆ. ರಮೀಜಾ ಕಾಣೆಯಾದ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ರುಂಡ, ಎರಡು ಕೈ, ಕಾಲು ನಾಪತ್ತೆಯಾಗಿದ್ದು ಕೊಲೆಗೈದವರು ಯಾರೆಂದು ಸುಳಿವು ಸಿಕ್ಕಿಲ್ಲ. ಈ ಕುರಿತು ಬನಹಟ್ಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.