ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 23 ರಂದು ನಡೆಯುವ ಮತದಾನಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಒಟ್ಟು 1938 ಮತಗಟ್ಟೆಗಳಿಗೆ 8527 ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ಮತಕ್ಷೇತ್ರಗಳು ಬರಲಿದ್ದು, ಅದರಲ್ಲಿ ಒಂದು ಗದಗ ಜಿಲ್ಲೆಯ ನರಗುಂದ ಮತಕ್ಷೇತ್ರ ಬರಲಿದೆ. ಒಟ್ಟು 17 ಲಕ್ಷ 547 ಮತದಾರರಿದ್ದು, ಇದರಲ್ಲಿ 8,50,381ಪುರುಷ ಮತದಾರರು, 8,50,074 ಮಹಿಳಾ ಮತದಾರರು ಹಾಗೂ ಇತರ 92 ಮತದಾರರಿದ್ದಾರೆ. ಈ ಬಾರಿ 39418 ಯುವ ಮತದಾರರು ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 21399 ವಿಕಲಚೇತನ ಮತದಾರರಿದ್ದು, ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ ಎಂದರು.
ಈ ಬಾರಿ ಪಿಂಕ್ ಮತಗಟ್ಟೆಗಳ ಬದಲಾಗಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 17 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಅಲ್ಲದೆ 2 ವಿಕಲಚೇತನ ಮತಗಟ್ಟೆಗಳು ಸಹ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
21ರ ಸಂಜೆ 6 ಗಂಟೆಯಿಂದ 48 ಗಂಟೆಗಳ ಪೂರ್ವದಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇಂದು ಸಂಜೆ 6 ಗಂಟೆಯಿಂದ 24 ರವರೆಗೆ ಬೆಳ್ಳಿಗೆ 6 ಗಂಟೆಯವರೆಗೆ ಮದ್ಯಪಾನ ನಿಷೇಧಿಸಲಾಗಿದೆ. ಈವರೆಗೆ ಜಿಲ್ಲಾದ್ಯಂತ ಒಟ್ಟು 53,69,091 ರೂ. ಜಪ್ತಿ ಮಾಡಲಾಗಿದ್ದು, ಅದರಲ್ಲಿ ದಾಖಲೆ ನೀಡಿದ 12,03,000 ರೂ. ಬಿಡುಗಡೆ ಮಾಡಲಾಗಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟು 55,65,190 ಲಕ್ಷ ರೂ. ಮೌಲ್ಯದ 24725 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಮತದಾನ ಜಾಗೃತಿಗಾಗಿ ಗ್ರಾಮೀಣ, ನಗರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಹಲವು ಬಗೆಯ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ. ಇದರಿಂದ ಈ ಬಾರಿ ಅತಿ ಹೆಚ್ಚು ಮತದಾನ ಆಗಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಎಸ್ಪಿ ಅಭಿನವ ಖರೆ ಮಾತನಾಡಿ, ಮತಗಟ್ಟೆಗಳಿಗೆ ಸುರಕ್ಷಿತವಾಗಿ ಇವಿಎಂ ಮಷಿನ್ಗಳನ್ನು ಸಾಗಿಸಲು ಮತ್ತು ಮತದಾನ ನಡೆಯುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು, ವಿವಿಧ ಪ್ರದೇಶಗಳಿಂದ ಹೆಚ್ಚಿನ ಸಿಬ್ಬಂದಿ ಕರೆಯಿಸಲಾಗಿದೆ ಎಂದು ತಿಳಿಸಿದರು.