ಬಾಗಲಕೋಟೆ: ಕೇಂದ್ರ ಸರ್ಕಾರದ ಭಾರತೀಯ ಮಂತ್ರಾಲಯ ಹಾಗೂ ಅಂಚೆ ಕಚೇರಿಯ ಸಹಯೋಗದೊಂದಿಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ್ ಚಾಲನೆ ನೀಡಿದರು.
ಅಂಚೆ ಕಚೇರಿಯ ಮುಖ್ಯ ಅಧೀಕ್ಷಕರಾದ ಭರತಕುಮಾರ್, ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಸಂಸದರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಗದ್ದಿಗೌಡರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತಿದ್ದಾರೆ. ಹಿಂದಿನ ಭಾರಿ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್, ಜಿಲ್ಲಾ ಕೇಂದ್ರದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯುವ ಉದ್ದೇಶ ಹೂಂದಿದ್ದರು. ಈ ಮೂಲಕ ಬಡ ಜನತೆಗೆ ಯೋಜನೆಗಳು ಸರಳ ರೀತಿಯಲ್ಲಿ ದೊರಕುವಂತಾಗಿಬೇಕು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಬಾಗಲಕೋಟೆ ನಗರದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ನಿರ್ಮಾಣವಾಗಿದ್ದು, ಇದರ ಸದೋಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಇದೇ ವೇಳೆ ಅಂಚೆ ಕಚೇರಿಯ ಮುಖ್ಯ ಅಧೀಕ್ಷಕ ಭರತಕುಮಾರ್ ಮಾತನಾಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ದಿನಾಂಕ, ಸಮಯ ನಿಗದಿಗೊಳಿಸಲಾಗುತ್ತದೆ. ಆಗ ಅಂಚೆ ಇಲಾಖೆಗೆ ಬಂದು ತಮ್ಮ ದಾಖಲೆಗಳನ್ನು ತೋರಿಸಿದರೆ ಸಾಕು, 15 ನಿಮಿಷದಲ್ಲಿ ಕೆಲಸ ಮುಗಿಸಿಕೊಂಡು ಹೊರಗೆ ಹೋಗಬಹುದು. ನಂತರ ಪೊಲೀಸ್ ಇಲಾಖೆಯಿಂದ ಪರೀಕ್ಷೆ ನಡೆದ ಬಳಿಕ 15 ರಿಂದ 20 ದಿನಗಳಲ್ಲಿ ಅಂಚೆ ಮೂಲಕ ಪಾಸ್ಪೋರ್ಟ್ ಮನೆಗೆ ಬರಲಿದೆ ಎಂದು ತಿಳಿಸಿದರು.