ಬಾಗಲಕೋಟೆ : ಜಿಲ್ಲೆಯ ಸಾವಳಗಿ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸುತ್ತಲೇ ಬಂದಿದ್ದರೂ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆ, ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ.
ಸಾವಳಗಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಸುಮಾರು 70 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದರೂ, ಕಡೆಗಣಿಸುತ್ತಲೇ ಬರಲಾಗಿದೆ. ರಾಜ್ಯದಲ್ಲಿ ಹಲವಾರು ಗ್ರಾಮಗಳನ್ನು ನೂತನ ತಾಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ಸಾವಳಗಿಯನ್ನು ಮಾತ್ರ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ : ಹಣ ಇದ್ದರೂ ರಸ್ತೆ ನಿರ್ಮಾಣಕ್ಕೆ ಮೀನಾಮೇಷ: ಬೇಸತ್ತ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ತಾಲೂಕು ಕೇಂದ್ರವಾಗಿ ಘೋಷಿಸುವವರೆಗೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ, ಗ್ರಾಮದ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಬಸವರಾಜ ಪರಮಗೊಂಡ, ಸುಶೀಲಕುಮಾರ ಬೆಳಗಲಿ, ಸುಭಾಷ ಪಾಟೋಳಿ, ವಿಠ್ಠಲ ಉಮರಾಣಿ, ಸತಗೌಡ ನ್ಯಾಮಗೌಡ, ಬಾಪುಗೌಡ ಬುಲಗೌಡ ಸೇರಿದಂತೆ ಹಲವರಿದ್ದರು.