ಬಾಗಲಕೋಟೆ: ರಾಜ್ಯ ಚುನಾವಣಾ ಆಯೋಗವು ಜನವರಿ 1, 2021ರ ಅರ್ಹತಾ ದಿನಾಂಕವನ್ನು ಆಧರಿಸಿ ಮುದ್ರಿಸಲಾಗುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಪರಿಷ್ಕೃತ ವೇಳಾ ಪಟ್ಟಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷೇಶ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಜನವರಿ 1, 2021ರ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಾರಂಭಿಸಲಾಗಿದ್ದು, ಮತದಾರರ ಪಟ್ಟಿ ಸೇರ್ಪಡೆಗೆ ನಮೂನೆ-6, ತೆಗೆದುಹಾಕಲು ನಮೂನೆ-7, ತಿದ್ದುಪಡಿಗೆ ನಮೂನೆ-8 ಹಾಗೂ ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ಬದಲಾವಣೆ ಮಾಡಲು ನಮೂನೆ 8(ಎ) ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ನವೆಂಬರ್ 1ರಿಂದ 15ರವರೆಗೆ ನಮೂನೆಗಳ ಸಿದ್ಧಪಡಿ ಕಾರ್ಯ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಪೂರ್ವ ಸಿದ್ಧತೆ ಕೈಗೊಂಡು 2020ರ ನವೆಂಬರ್ 18ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.
ನವೆಂಬರ್ 18ರಿಂದ ಡಿಸೆಂಬರ್ 17ರವರೆಗೆ ಕರಡು ಮತದಾರರ ಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ತದನಂತರ ನವೆಂಬರ್ 22, ನವೆಂಬರ್ 29, ಡಿಸೆಂಬರ್ 6 ಹಾಗೂ 13ರ ಭಾನುವಾರ ವಿಶೇಷ ಆಂದೋಲನ ಕೈಗೊಂಡು ಕರಡು ಮತದಾರರ ಪಟ್ಟಿಗೆ ಸ್ವೀಕೃತ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.