ನವದೆಹಲಿ: ಕೆಟ್ಟ ಆಲೋಚನೆಗಳಿಂದ ದೂರವಿರುವ ಸಲುವಾಗಿ ಯೋಗ, ಧ್ಯಾನ ಮಾಡುತ್ತಿದ್ದೇನೆ ಜೊತೆಗೆ ಆಧ್ಯಾತ್ಮಿಕ ಗುರುಗಳಿಂದ ಸಲಹೆಗಳನ್ನು ಪಡೆಯುತ್ತಿದ್ದೇನೆ ಎಂದು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ಯೂಟ್ಯೂಬ್ ಕಾರ್ಯಕ್ರಮ 'ಮೈಂಡ್ ಮ್ಯಾಟರ್ಸ್'ನಲ್ಲಿ ಮಾತನಾಡಿದ ಪೂಜಾರ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕಾದರೆ ಒತ್ತಡ ನಿರ್ವಹಣೆ ಅತ್ಯಂತ ಮುಖ್ಯವಾದುದು ಎಂದಿದ್ದಾರೆ.
"ನೀವು ನಕಾರಾತ್ಮಕ ಆಲೋಚನೆಯಲ್ಲಿದ್ದರೆ, ನಿಮ್ಮ ಸುತ್ತಲಿನ ಎಲ್ಲವೂ ನಕಾರಾತ್ಮಕವಾಗಿಯೇ ಕಾಣುತ್ತದೆ. ನಾನು ಯೋಗ ಮಾಡುತ್ತೇನೆ ಮತ್ತು ಧ್ಯಾನ ಮಾಡಲು ಪ್ರಯತ್ನಿಸುತ್ತೇನೆ. ನಾನು ಪ್ರತಿದಿನ ಪ್ರಾರ್ಥನೆಗಳನ್ನು ಮಾಡುತ್ತೇನೆ, ಅದು ಪಾಸಿಟಿವ್ ಮನಸ್ಥಿತಿಯಲ್ಲಿ ಇರಲು ನನಗೆ ಸಹಾಯ ಮಾಡುತ್ತದೆ" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಅಭಿಮಾನಿಗಳಿಗೆ ಸೈಮನ್ ಡೌಲ್ ಹೃದಯಸ್ಪರ್ಶಿ ಸಂದೇಶ
"ನಾನು ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಒಂದು ಸಮಯವಿತ್ತು. ಸಣ್ಣವನಿದ್ದಾಗ ಸಮಸ್ಯೆಗಳಾದರೆ ನಾನು ತಾಯಿಯ ಬಳಿಗೆ ಹೋಗುತ್ತಿದ್ದೆ. ನಾನು ತುಂಬಾ ಒತ್ತಡ ಮತ್ತು ಹೆದರಿಕೆಯಿಂದ ಇದ್ದೇನೆ, ನನಗೆ ಕ್ರಿಕೆಟ್ ಆಡಲು ಇಷ್ಟವಿಲ್ಲ ಎಂದು ಹೇಳುತ್ತಿದೆ. ಆದರೆ, ಈಗ ನನಗೆ ಹೇಗೆ ಒತ್ತಡ ನಿರ್ವಹಣೆ ಮಾಡಬೇಕೆಂದು ಗೊತ್ತಿದೆ ಎಂದು 85 ಟೆಸ್ಟ್ ಪಂದ್ಯಗಳಲ್ಲಿ 6,244 ರನ್ ಗಳಿಸಿರುವ ಬಲಗೈ ಬ್ಯಾಟ್ಸ್ಮನ್ ಹೇಳಿದ್ದಾರೆ.