ಅಬುಧಾಬಿ: ಐಪಿಎಲ್ ಇತಿಹಾಸದಲ್ಲಿ ಸತತ 2 ಮೇಡಿನ್ ಓವರ್ ಎಸೆದ ಹಾಗೂ ರನ್ ನೀಡುವ ಮುನ್ನ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದ ಮೊಹಮ್ಮದ್ ಸಿರಾಜ್ಗೆ ಆರಂಭದಲ್ಲಿ ದಾಳಿಗಿಳಿಸುವ ಬಗ್ಗೆ ಯಾವುದೇ ಯೋಜನೆ ಇರಲಿಲ್ಲ ಎಂದು ಆರ್ಸಿಬಿ ತಂಡದ ನಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬುಧವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ ಸಿರಾಜ್, ಕೆಕೆಆರ್ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಸೇರಿಸಿದ್ರು. ಸಿರಾಜ್ ತಾವು ಎಸೆದ ಮೊದಲ ಎರಡು ಓವರ್ಗಳಲ್ಲಿ ಒಂದು ರನ್ ಕೂಡ ಬಿಟ್ಟುಕೊಡದೆ 3 ವಿಕೆಟ್ ಕಬಳಿಸಿ ನೂತನ ದಾಖಲೆ ಬರೆದರು.
![Mohammed Siraj](https://etvbharatimages.akamaized.net/etvbharat/prod-images/pn_8929_2210newsroom_1603329946_724.jpg)
ಟಾಸ್ ಸೋತು ಬೌಲಿಂಗ್ಗೆ ಮುಂದಾದ ಆರ್ಸಿಬಿ ತಂಡ ಆರಂಭದಲ್ಲಿ ಕ್ರಿಸ್ ಮೋರಿಸ್ ಜೊತೆಗೆ ವಾಷಿಂಗ್ಟನ್ ಸುಂದರ್ರನ್ನು ದಾಳಿಗೆ ಇಳಿಸಲು ಯೋಜಿಸಿತ್ತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, "ನಿಜ ಹೇಳಬೇಕಂದ್ರೆ ಸಿರಾಜ್ಗೆ ಬೌಲಿಂಗ್ ನೀಡುವ ನಿರ್ಧಾರವನ್ನು ಬಹಳ ತಡವಾಗಿ ತೆಗೆದುಕೊಂಡೆ. ಮೋರಿಸ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ದಾಳಿಗಿಳಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಪಿಚ್ ಬಹಳ ಒಣಗಿತ್ತು. ಪರಿಸ್ಥಿತಿಗಳು ವೇಗಿಗಳಿಗೆ ನೆರವಾಗುವಂತಿದ್ದವು. ಹೀಗಾಗಿ ಸಿರಾಜ್ರನ್ನು ದಾಳಿಗಿಳಿಸಲು ನಿರ್ಧರಿಸಲಾಯಿತು" ಎಂದಿದ್ದಾರೆ.
![Virat Kohli](https://etvbharatimages.akamaized.net/etvbharat/prod-images/rcbmain-1580199881_2210newsroom_1603329946_459.jpg)
"ಕಳೆದ ವರ್ಷ ಸಿರಾಜ್ ಉತ್ತಮ ಪ್ರದರ್ಶನ ತೋರಿರಲಿಲ್ಲ. ಈ ವರ್ಷ ತುಂಬಾ ಕಷ್ಟ ಪಟ್ಟಿದ್ದಾರೆ. ನೆಟ್ನಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ. ಈ ಫಲಿತಾಂಶದಿಂದ ಅದು ತಿಳಿಯುತ್ತದೆ. ಅವರು ಹೀಗೆ ಮುಂದುವರೆಯಬೇಕೆಂದು ಬತಸುತ್ತೇವೆ" ಎಂದಿದ್ದಾರೆ.
ನಾಲ್ಕು ಓವರ್ ಬೌಲಿಂಗ್ ನಡೆಸಿದ ಸಿರಾಜ್ ಕೇವಲ 8 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.