ನವದೆಹಲಿ: ಬಹುನಿರೀಕ್ಷಿತ ದೇಸಿ ಕ್ರಿಕೆಟ್ ಋತುವನ್ನು 2021ರ ಜನವರಿ 1ರಿಂದ ಆರಂಭಿಸುವ ಯೋಚನೆಯಲ್ಲಿರುವುದಾಗಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊರೊನಾ ವೈರಸ್ ಭೀತಿ ಕಾಡಿದ್ದರಿಂದ ಈ ವರ್ಷದ ದೇಸಿ ಋತುವಿನ ಬಗ್ಗೆ ಕಳೆದ ಭಾನುವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ ನಡೆದಿದೆ. ಈ ವೇಳೆ ದೇಸಿ ಕ್ರಿಕೆಟ್ ಆರಂಭಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಸಮಯ ಚರ್ಚೆ ನಡೆದಿದೆ ಎನ್ನಲಾಗಿದೆ.
"ನಾವು ದೇಸಿ ಕ್ರಿಕೆಟ್ಗೆ ಸಂಬಂಧಿಸಿ ಭಾನುವಾರ ಸುದೀರ್ಘ ಸಭೆಯಲ್ಲಿ ಚರ್ಚಿಸಿದ್ದೇವೆ. 2021ರ ಜನವರಿ 1ರಿಂದ ದೇಸಿ ಕ್ರಿಕೆಟ್ ಟೂರ್ನಿಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ,' ಎಂದು ದುಬೈನಲ್ಲಿರುವ ಸೌರವ್ ಗಂಗೂಲಿ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಇದು ಮೊಟಕುಗೊಳಿಸಿದ ಋತುಮಾನವೇ ಎಂದು ಕೇಳಿದ್ದಕ್ಕೆ, " ನಾವು ಬಹುತೇಕ ಸಂಪೂರ್ಣ ರಣಜಿ ಮ್ಯಾಚ್ ನೋಡಲಿದ್ದೇವೆ. ಯಾಕೆಂದರೆ ಎಲ್ಲಾ ಟೂರ್ನಿಗಳನ್ನೂ ನಡೆಸಲು ಸಾಧ್ಯವಾಗದಿರುವುದರಿಂದ ರಣಜಿಯನ್ನಾದರೂ ಸಂಪೂರ್ಣ ನಡೆಸಲು ಯೋಚಿಸಿದ್ದೇವೆ" ಎಂದು ಗಂಗೂಲಿ " ತಿಳಿಸಿದ್ದಾರೆ.