ಮುಂಬೈ: ನಾನು ಹಲವಾರು ನಾಯಕರ ಕೈಕೆಳಗೆ ಆಡಿದ್ದು, ಅದರಲ್ಲಿ ಅನಿಲ್ ಕುಂಬ್ಳೆ ಅತ್ಯುತ್ತಮ ನಾಯಕರಾಗಿದ್ದರು ಎಂದು ಆರ್ಪಿಸಿಂಗ್ ಹೇಳಿದ್ದಾರೆ.
ಆಕಾಶ್ ಚೊಪ್ರಾ ಜೊತೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್ಪಿ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ಧೋನಿ ನಾಯಕತ್ವದಲ್ಲಿ ಆಡಿದ್ದೇನೆ. ಆದರೆ ಆನಿಲ್ ಕುಂಬ್ಳೆ ಬೌಲರ್ಗಳನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರು ಅರ್ಥ ಮಾಡಿಕೊಂಡಿರಲಿಲ್ಲ ಎಂದು ಆರ್ಪಿಸಿಂಗ್ ಹೇಳಿದ್ದಾರೆ.
"ಕುಂಬ್ಳೆ ಕೂಡ ಬೌಲರ್ ಆಗಿದ್ದರಿಂದ ಮತ್ತೊಬ್ಬ ಬೌಲರ್ನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರು. ಇಂತಹ ಗುಣ ನನಗೆ ತುಂಬಾ ನೆರವಾಯಿತು" ಎಂದು 2007ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವವಾಗಿದ್ದ ಆರ್ಪಿ ಹೇಳಿದ್ದಾರೆ.
ಧೋನಿ ಬಗ್ಗೆ ಮಾತನಾಡಿದ ಅವರು, "ಧೋನಿ ನಾನು ಉತ್ತಮ ಗೆಳೆಯರು. ವೃತ್ತಿ ಜೀವನದ ಆರಂಭದಲ್ಲಿ ನಾನು - ಧೋನಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದೆವು. ಆದರೆ, ಅವರು ನಾಯಕನಾದ ಮೇಲೆ ಅವರ ಗ್ರಾಫ್ ಏರಿಕೆಯಾಯಿತು, ನನ್ನದು ಇಳಿಕೆಯಾಯಿತು. ಆದರೆ, ಧೋನಿ ಜೊತೆಗಿನ ಸ್ನೇಹ ಸಂಬಂಧ ಮಾತ್ರ ಹಾಗೆಯೇ ಉಳಿದಿದೆ" ಎಂದರು.
ಧೋನಿ ಒಬ್ಬ ನಾಯಕನಾಗಿ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ರು. ಸಮಯಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರ ರೀತಿ ಆಟದ ಬಗ್ಗೆ ಆಲೋಚಿಸುವ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಟೀಮ್ನಿಂದ ಹೊರಬಿದ್ದ ವೇಳೆ 2-3 ಆವೃತ್ತಿಗಳಲ್ಲಿ ಗರಿಷ್ಠ ವಿಕೆಟ್ ಪಡೆದರೂ ನನಗೆ ಮತ್ತೆ ಅವಕಾಶ ಸಿಗಲಿಲ್ಲ. ಇದರ ಬಗ್ಗೆ ಧ್ವನಿ ಎತ್ತಿದರೂ ಆಯ್ಕೆ ಸಮಿತಿಯಿಂದ ಯಾವುದೇ ಉತ್ತರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.