ಹೈದರಾಬಾದ್: ಇಂಗ್ಲೆಂಡ್ ಕ್ರಿಕೆಟ್ ತಂಡದ ತರಬೇತುದಾರರು, ನಾಯಕನಿಗೆ ಸಂದೇಶ ಕಳುಹಿಸಲು ಪ್ಲೇಕಾರ್ಡ್ ಬಳಸುತ್ತಿರುವುದನ್ನು ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ತಂಡದ ಮುಖ್ಯ ವಿಶ್ಲೇಷಕರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ಕ್ರಮವನ್ನು ಇಂಗ್ಲೆಂಡ್ ತಂಡ ಸಮರ್ಥಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾರ್ಗನ್, ಮೊದಲೇ ಪಂದ್ಯದ ತೀರ್ಪುಗಾರರ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಒಪ್ಪಿಗೆ ನೀಡುವ ಮೊದಲು ರೆಫ್ರಿ ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ (ಐಸಿಸಿ) ಚರ್ಚಿಸಿದ್ದಾರೆಯೇ? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ. "ಐಸಿಸಿಗೆ ಮ್ಯಾಚ್ ರೆಫ್ರಿ ಇದನ್ನು ದೃಢೀಕರಿಸಿದ್ದಾರೆಯೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ? ಅವರು ಐಸಿಸಿಯನ್ನು ಕೇಳಿದ್ದಾರೆಯೇ? ಐಸಿಸಿಯ ಕ್ರಿಕೆಟ್ ಸಮಿತಿಯು ಇದನ್ನು ಮಂಜೂರು ಮಾಡಿದೆಯೇ? ಇದು ನಮಗೆ ಇನ್ನೂ ತಿಳಿದಿಲ್ಲ" ಎಂದು ಗವಾಸ್ಕರ್ ಹೇಳಿದ್ದಾರೆ.

"ಇದು ಮೊದಲ ಬಾರಿಗೆ ನಡೆಯುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್ನಲ್ಲೂ ಈ ರೀತಿಯ ತಂತ್ರವನ್ನು ಬಳಸಲಾಗಿದೆ ಎಂದು ನಮಗೆ ತಿಳಿಸಲಾಯಿತು. ಬಹುಶಃ ಈ ತಂತ್ರವನ್ನು ಅಳವಡಿಸಿಕೊಂಡ ವ್ಯಕ್ತಿ ಅಲ್ಲಿ ವಿಶ್ಲೇಷಕರಾಗಿದ್ದರು ಎನಿಸುತ್ತದೆ. ಕ್ರಿಕೆಟ್ನಲ್ಲಿ ಇಂಥ ತಂತ್ರ ಬಳಸಲಾಗುತ್ತಿದೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಆತಂಕಕಾರಿಯಾದ ಎರಡನೆಯ ವಿಷಯವೆಂದರೆ ಡಿಆರ್ಎಸ್ ಪರಿಸ್ಥಿತಿಯಲ್ಲಿ, ಡಿಆರ್ಎಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಹಾಯ ಮಾಡಲು ಅಲ್ಲಿ ಒಂದು ಕೋಡ್ ಇದೆಯೇ?" ಎಂದು ಪ್ರಶ್ನಿಸಿದ್ದಾರೆ.
ಓದಿ: ಈ ದಶಕದಲ್ಲಿ ಕೊಹ್ಲಿ ಅತ್ಯಂತ ಪ್ರಭಾವಶಾಲಿ ಆಟಗಾರ: ಗವಾಸ್ಕರ್
ತಂಡದ ನಾಯಕನಿಗೆ ಸಂದೇಶಗಳನ್ನು ಕಳುಹಿಸಲು ಬಯಸಿದರೆ 12ನೇ ಆಟಗಾರನನ್ನು ಬಳಸುವುದಕ್ಕೆ ಆದ್ಯತೆ ನೀಡುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.
"ನೀವು ಯಾವುದೇ ಫೀಲ್ಡ್ ಪ್ಲೇಸಿಂಗ್ ಅಥವಾ ಬೌಲಿಂಗ್ ಬದಲಾವಣೆಯ ಬಗ್ಗೆ ಸಂದೇಶವನ್ನು ಕಳುಹಿಸಲು ಬಯಸಿದರೆ, ಒಂದು ಬಾಟಲ್ ನೀರು ಅಥವಾ ಯಾವುದಾದರು ವಸ್ತು ನೀಡಿ 12ನೇ ಆಟಗಾರನನ್ನು ಕಳುಹಿಸಿ. ಅಥವಾ ತರಬೇತುದಾರರೇ ಬೌಂಡರಿಯಲ್ಲಿರುವ ಫೀಲ್ಡರ್ಗೆ ಸಂದೇಶ ರವಾನಿಸಬಹುದು" ಎಂದು ಹೇಳಿದ್ದಾರೆ.