ಕೊಚ್ಚಿ: ಟೀಂ ಇಂಡಿಯಾದ ವೇಗಿ ಎಸ್.ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷದ ನಿಷೇಧಿತ ಅವಧಿ ಮುಗಿಯುವ ಹಂತ ತಲುಪಿದೆ. ಈ ಹೊತ್ತಲ್ಲಿ ಅವರಿಗೆ ರಣಜಿ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಉರುಳು:
ಸ್ಪಾಟ್ ಫಿಕ್ಸಿಂಗ್ ಆರೋಪದಿಂದಾಗಿ ಶ್ರೀಶಾಂತ್ ಮತ್ತು ಅವರು ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡೇಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೆಹಲಿ ಪೊಲೀಸರು 2013 ರ ಮೇ ತಿಂಗಳಲ್ಲಿ ಬಂಧಿಸಿದ್ದರು. ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಗಿ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಿತ್ತು.
ನ್ಯಾಯಾಲಯದಲ್ಲಿ ಹೋರಾಟ:
ಈ ಕುರಿತು ನ್ಯಾಯಾಲಯದಲ್ಲಿ ಶ್ರೀಶಾಂತ್ ಸಾಕಷ್ಟು ಹೋರಾಟ ನಡೆಸಿದ್ದರು. 2015 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಅವರನ್ನು ಮುಕ್ತರನ್ನಾಗಿಸಿತ್ತು. ಆದರೆ ಬಿಸಿಸಿಐನಿಂದ ಹೇರಿದ್ದ ನಿಷೇಧ ಮುಂದುವರೆದಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2019ರಲ್ಲಿ ಆರೋಪಿಯ ತಪ್ಪನ್ನು ಎತ್ತಿ ಹಿಡಿಯಿತಾದರೂ, ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡುವಂತೆ ಬಿಸಿಸಿಐಗೆ ಸೂಚಿಸಿತ್ತು. ನ್ಯಾಯಾಲಯದ ಆದೇಶದ ನಂತರ, ಬಿಸಿಸಿಐ ಶ್ರೀಶಾಂತ್ ಶಿಕ್ಷೆಯನ್ನು ಜೀವಾವಧಿ ನಿಷೇಧದಿಂದ ಏಳು ವರ್ಷಕ್ಕೆ ಸೀಮಿತಗೊಳಿಸಿದೆ. ಈ ಅವಧಿ ಮುಂಬರುವ ಸೆಪ್ಟೆಂಬರ್ಗೆ ಕೊನೆಗೊಳ್ಳಲಿದೆ.
ಕೇರಳ ಕ್ರಿಕೆಟ್ ಅಕಾಡೆಮಿಗೆ ಶ್ರೀಶಾಂತ್ ಧನ್ಯವಾದ:
ನನಗೆ ಅವಕಾಶ ನೀಡಿದ ಕೆಸಿಎಗೆ ನಾನು ಋಣಿಯಾಗಿದ್ದೇನೆ. ನನ್ನ ಫಿಟ್ನೆಸ್ ಮತ್ತು ವೇಗವನ್ನು ಆಟದಲ್ಲಿ ಸಾಬೀತುಪಡಿಸುತ್ತೇನೆ. ಎಲ್ಲಾ ವಿವಾದಗಳು ಕೊನೆಗೊಳ್ಳುವ ಸಮಯವಿದು ಎಂದು ಶ್ರೀಶಾಂತ್ ಸಂತಸ ವ್ಯಕ್ತಪಡಿಸಿದ್ದಾರೆ.
ನಿಷೇಧಪೂರ್ವ ಶ್ರೀಶಾಂತ್ ಸಾಧನೆ:
ನಿಷೇಧಕ್ಕೂ ಮುನ್ನ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 75 ವಿಕೆಟ್ ಪಡೆದಿದ್ದರು. ಮೈದಾನದಲ್ಲಿ ವಿಭಿನ್ನ ಆಟದಿಂದ ಹೆಸರುವಾಸಿಯಾಗಿದ್ದ ಇವರು 2011 ರಲ್ಲಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ಸದಸ್ಯರೂ ಆಗಿದ್ದರು.