ಅಡಿಕೆ ಟೀ ಸಂಶೋಧಕ ನಿವೇದನ್ ನೆಂಪೆ, ಈ ವಾರ 'ವೀಕೆಂಡ್ ವಿಥ್ ರಮೇಶ್' ಗ್ರ್ಯಾಂಡ್ ಫಿನಾಲೆಯ ಅಪರೂಪದ ಅತಿಥಿಯಾಗಿದ್ದಾರೆ. ಮಲೆನಾಡು ಶಿವಮೊಗ್ಗದ ಮಂಡಗದ್ದೆಯ ಯುವ ವಿಜ್ಞಾನಿ ಮಂಗನ ಕಾಯಿಲೆಗೆ ಔಷಧಿ ಕಂಡುಹಿಡಿದು ಭೇಷ್ ಎನಿಸಿಕೊಂಡಿದ್ದರು. ಡಿಎಂಪಿ ಎಣ್ಣೆಯಿಂದ ತಯಾರಾದ ನಾಟಿ ಔಷಧಿ ಕೆಎಫ್ಡಿಆರ್ಜೆಲ್ ಸಂಶೋಧಿಸಿದವರು ಇವರೇ. ಹೀಗೆ ಹಲವು ಹೊಸ ಸಂಶೋಧನೆಗಳ ಹರಿಕಾರ 4ನೇ ಸೀಸನ್ನ 'ವೀಕೆಂಡ್ ವಿತ್ ರಮೇಶ್' ಗ್ರ್ಯಾಂಡ್ ಫಿನಾಲೆಯಲ್ಲಿ ಸಾಧಕರ ಸೀಟಿನ ಮೇಲೆ ಆಸೀನರಾಲಿದ್ದಾರೆ.
ಒಂದು ಹೊತ್ತಿನ ಊಟಕ್ಕೆ ಪರದಾಡುವಂತ ಸ್ಥಿತಿಯಲ್ಲಿದ್ದ ನಿವೇದನ್, ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಫಾರ್ಮಸಿಯಲ್ಲಿ ಪದವಿ ಪಡೆದರೂ ಊಟಕ್ಕೆ ದುಡ್ಡಿಲ್ಲದೇ ಕೇವಲ ಟೀ ಕುಡಿದು ದಿನ ಕಳೆದವರು.
ಕೆಲವು ಕಾಯಿಲೆಗಳಿಗೆ ನಾಟಿ ಔಷಧಿ ಮಾತ್ರ ಮದ್ದು ಎಂಬುದರ ಬಗ್ಗೆ ಅವರು ಸಂಶೋಧನೆ ನಡೆಸಿದಿದ್ದಾರೆ. ಸರ್ಕಾರದ ಸ್ಕಾಲರ್ ಆಗಿ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಇನ್ ಮ್ಯಾನುಫ್ಯಾಕ್ಚರ್ ಆ್ಯಂಡ್ ಮ್ಯಾನೆಜ್ಮೆಂಟ್ ಟೆಕ್ನಾಲಜಿಯಲ್ಲಿ ಡಿಗ್ರಿ ಮಾಡಿದ್ದಾರೆ.
ಇನ್ನು ಬಲವಾಗಿ ಕೇಳಿ ಬಂದಿದ್ದ ಅಡಿಕೆ ನಿಷೇಧ ಕೂಗಿನ ವಿರುದ್ಧ ಹೋರಾಟಕ್ಕೆ ನಿಂತ ನಿವೇದನ್, ಅಡಿಕೆಯ ಬದಲಿ ಬಳಕೆ ಬಗ್ಗೆ ಸಂಶೋಧಿಸಿ ಇದು ಅನಾರೋಗ್ಯಕಾರಿಯಲ್ಲ. ಬದಲಿಗೆ ಇದರಲ್ಲೂ ಔಷಧೀಯ ಗುಣಗಳಿವೆ ಎಂಬುವುದನ್ನು ಜಗತ್ತಿಗೆ ತೋರಿಸಲು, ಅಡಿಕೆಯಿಂದ ಟೀ ತಯಾರಿಸಿದರು. ಹಾಗೆಯೇ, ಮಂಗನಕಾಯಿಲೆಗೂ ಔಷಧಿ ಕಂಡು ಹಿಡಿದರು. ಇದಕ್ಕಾಗಿ ಇವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ.