ಕಿರುತೆರೆ ವೀಕ್ಷಕರಿಗಂತೂ ಈಗ ಭರ್ಜರಿ ಮನರಂಜನೆ ದೊರೆಯುತ್ತಿದೆ. ಧಾರಾವಾಹಿಗಳ ಮಹಾಸಂಗಮವನ್ನು ವೀಕ್ಷಕರು ನೋಡಿ ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ, ಜೀ ನಂತರ ಇದೀಗ ಮಹಾಸಂಗಮ ಪ್ರಸಾರಕ್ಕೆ ಉದಯ ಟಿವಿ ಮುಂದಾಗಿದೆ.
![Mahasangama episodes in Small screen](https://etvbharatimages.akamaized.net/etvbharat/prod-images/kn-bng-05-mahasangama-kasturinivasa-manasare-photo-ka10018_04092020182549_0409f_1599224149_1036.jpg)
ಕಸ್ತೂರಿ ನಿವಾಸ-ಸೇವಂತಿ ಕುಟುಂಬ ಹಾಗೂ ಕಾವ್ಯಾಂಜಲಿ-ಮನಸಾರೆ ಧಾರಾವಾಹಿಗಳ ಮಹಾಸಂಗಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಹಲವಾರು ಸಮಸ್ಯೆ ಮತ್ತು ಮನಸ್ತಾಪಗಳನ್ನು ಎದುರಿಸುತ್ತಿರುವ 'ಸೇವಂತಿ' ದೇವರ ಮೊರೆ ಹೋಗಿದ್ದಾಳೆ. ಇನ್ನೊಂದೆಡೆ 'ಕಸ್ತೂರಿ ನಿವಾಸ'ದವರು ಕೂಡಾ ದೇವಿಯ ಕೃಪೆಗೆ ಪಾತ್ರರಾಗಲು ಹೊರಟಿದ್ದಾರೆ. ಕಸ್ತೂರಿ ನಿವಾಸದಲ್ಲಿರುವ ದ್ವೇಷ ದೂರಾಗುತ್ತಾ? ಸೇವಂತಿಯ ನಿಷ್ಕಲ್ಮಶ ಮನಸ್ಸಿಗೆ ಗೆಲುವು ಸಿಗುತ್ತಾ? ಎಂಬುದಕ್ಕೆ ಈ ಮಹಾಸಂಗಮದಲ್ಲಿ ತೆರೆ ಬೀಳಲಿದೆ.
ವೇದ ಹುಟ್ಟುಹಬ್ಬದಂದು ಮನೆಯವರೆಲ್ಲಾ ಸೇರಿ ಪ್ಲ್ಯಾನ್ ಮಾಡಿ, ವೇದ ಗೆಳೆಯನಾದ 'ಮನಸಾರೆ'ಯ ಆನಂದ್ ಮಹೇಂದ್ರ ಮತ್ತು ಕುಟುಂಬದವರನ್ನು ಕರೆಸಿ ವೇದಾಗೆ ಸರ್ಪೈಸ್ ಕೊಡುತ್ತಾರೆ. ಇದರ ನಡುವೆ ಕಾವ್ಯ ಹಠಕ್ಕೆ ಅಂಜಲಿ ಕೂಡಾ ವೇದ ಮನೆಗೆ ಬರುವ ಸನ್ನಿವೇಶ ಎದುರಾಗುತ್ತದೆ. ಹಾಗೆ ಇನ್ನೊಂದೆಡೆ ಪ್ರಾರ್ಥನಾ ಕುಟುಂಬದೊಂದಿಗೆ ಯುವ ಕೂಡಾ ಅಲ್ಲಿಗೆ ಬರುವಂತಾಗುತ್ತದೆ. ವೇದ ಮತ್ತು ಅಂಜಲಿ ನಡುವೆ ಇರುವ ಶೀತಲ ಸಮರ ತಾರಕಕ್ಕೇರಲಿದೆಯಾ...? ಸುಶಾಂತ್ ಮನಸಿನ ಒದ್ದಾಟ ಅಂಜಲಿಗೆ ತಿಳಿಯಲಿದ್ಯಾ..? ಪ್ರಾರ್ಥನಾ ಪ್ರೀತಿಗೆ ಕಾಯುತ್ತಿರುವ ಯುವನಿಗೆ ಪ್ರೀತಿಯ ಸಹಿ ಸಿಗುತ್ತಾ...? ಎಂಬುದು ಈ ಮಹಾಸಂಗಮದಲ್ಲಿ ಹೊರಬೀಳಲಿದೆ.
![Mahasangama episodes in Small screen](https://etvbharatimages.akamaized.net/etvbharat/prod-images/kn-bng-05-mahasangama-kasturinivasa-manasare-photo-ka10018_04092020182549_0409f_1599224149_1031.jpg)
ಮನೆಯವರ ಸಂತೋಷಕ್ಕೆ ತನ್ನ ನೋವನ್ನು ಮರೆ ಮಾಚುವ ಸೇವಂತಿ ಒಂದೆಡೆಯಾದರೆ, ಮೃದುಲಾ ಮತ್ತು ಮಂಗಳ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಹೋರಾಡುತ್ತಿರುವ ಕಸ್ತೂರಿ ನಿವಾಸದ ಪಾರ್ವತಿ ಇನ್ನೊಂದೆಡೆ. ಅಕ್ಕ ತಂಗಿಯ ಬಾಂಧವ್ಯದ ಕಥೆಯಾದ 'ಕಾವ್ಯಾಂಜಲಿ' ಜೊತೆ ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳ ಕಥೆ 'ಮನಸಾರೆ'.
ಈ ಎರಡೂ ಧಾರಾವಾಹಿಗಳ ಮಹಾಸಂಗಮದಲ್ಲಿ ಮಹತ್ತರ ತಿರುವು ಕಾಣಲಿದ್ದು, ಬೇಡಿಕೆಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಪೂರ್ಣಗೊಳಿಸಿದ್ದು ಸೆಪ್ಟೆಂಬರ್ 7ರಂದು ಸಂಜೆ 7-8 ಕಸ್ತೂರಿ ನಿವಾಸ - ಸೇವಂತಿ ಮತ್ತು ರಾತ್ರಿ 8.30-9.30 ವರೆಗೆ ಕಾವ್ಯಾಂಜಲಿ - ಮನಸಾರೆ ಮಹಾಸಂಗಮಗಳ ಮಹಾಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.