ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ ನಿನ್ನೆಯಷ್ಟೇ 25 ವರ್ಷಗಳನ್ನು ಪೂರೈಸಿದೆ. 1995 ರಲ್ಲಿ ಬಿಡುಗಡೆಯಾದ ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು.
ಈ ಚಿತ್ರದ ನಂತರ ಭೂಗತ ಜಗತ್ತಿನ ಹಲವು ಚಿತ್ರಗಳು ಬಿಡುಗಡೆಯಾದರೂ ಈ ಚಿತ್ರದ ಖದರ್ ಮಾತ್ರ ಇನ್ನೂ ಮಾಸಿಲ್ಲ. ಉಪೇಂದ್ರ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ಸಿನಿ ಬದುಕಿಗೆ ದೊಡ್ಡ ಬ್ರೇಕ್ ನೀಡಿದ ಈ ಚಿತ್ರ ಬಿಡುಗಡೆಯಾದಾಗ ರಾಜ್ಯಾದ್ಯಂತ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿತ್ತು. ಈ ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ.
ಚಿತ್ರದಲ್ಲಿ ನಿಜವಾದ ರೌಡಿಗಳಾದ ಜೇಡರಳ್ಳಿ ಕೃಷ್ಣ, ಕೊರಂಗು ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ ಹಾಗೂ ಇನ್ನಿತರರು ಅಭಿನಯಿಸಿದ್ದರು. ಚಿತ್ರದ ಬಗ್ಗೆ ಜೇಡರಳ್ಳಿ ಕೃಷ್ಣಪ್ಪ ಮಾತನಾಡಿದ್ದಾರೆ. 1995ರಲ್ಲಿ 'ಓಂ' ಸಿನಿಮಾ ರಿಲೀಸ್ ಮಾಡುವುದು ಬೇಡವೆಂದು ಪೊಲೀಸ್ ಇಲಾಖೆ ನೋಟೀಸ್ ನೀಡಿತ್ತಂತೆ. ಆಗ ಡಾ. ರಾಜ್ಕುಮಾರ್ ಮಾತಿಗೆ ಬೆಲೆ ನೀಡಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಈ ಎಲ್ಲಾ ವಿಚಾರವನ್ನು ಕೃಷ್ಣಪ್ಪ ಹೇಳಿಕೊಂಡಿದ್ದಾರೆ.