ವರನಟ ಡಾ. ರಾಜ್ಕುಮಾರ್ ಅವರ ತದ್ರೂಪು ಎಂದೇ ಕರೆಸಿಕೊಳ್ಳುತ್ತಿದ್ದ ರಂಗಭೂಮಿ ನಟ ಜಯಕುಮಾರ್ ಕೊಡಗನೂರು 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಯಕುಮಾರ್ ಮೂಲತಃ ದಾವಣಗೆರೆಯ ಕೊಡಗನೂರಿನವರು. ರಂಗಭೂಮಿಯ ಅಪ್ಪಟ ಕಲಾವಿದರಾದ ಇವರು ಅಭಿನಯ ಚತುರರು. ಕಿರುತೆರೆ ಕ್ಷೇತ್ರದ ಸಾಧನೆಗಾಗಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ. ಗುಬ್ಬಿ ಕಂಪನಿ, ಗುಡಗೇರಿ ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್, ಶಶಿಕುಮಾರ್, ಶಿವರಾಜ್ಕುಮಾರ್ ಸೇರಿದಂತೆ ಅನೇಕ ನಟರ ಜೊತೆ ಪೋಷಕ ಪಾತ್ರದಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಕಲಬುರಗಿಯ ಕಾಯಂ ಮೊಕ್ಕಾಂ ನಾಟಕ ಕಂಪನಿ ಆಯೋಜಿಸಿದ್ದ ನಾಟಕವೊಂದರಲ್ಲಿ ನಟಿಸುತ್ತಿದ್ದ ವೇಳೆ ಜಯಕುಮಾರ್ಗೆ ಹೃದಯಾಘಾತ ಸಂಭವಿಸಿತ್ತು. ಆ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಜಯಕುಮಾರ್ ಗುಣಮುಖರಾಗಿ ದಾವಣಗೆರೆಯಲ್ಲಿ ವಾಸವಿದ್ದಾರೆ ಎಂದು ಪುತ್ರ ಮಾರುತಿ ತಿಳಿಸಿದ್ದಾರೆ.