ನಿನ್ನೆ ವೇದಿಕೆ ಮೇಲೆ ಸುದೀಪ್ ಅವರು ಪ್ರಶಾಂತ್ಗೆ ಕಾಣದಂತೆ ನೀವೆಲ್ಲ ಇರಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ ಸ್ಪರ್ಧಿಗಳು ಸಹ ಸಂಬರಗಿಗೆ ಶಾಕ್ ನೀಡಿದರು. ಪ್ರಶಾಂತ್ ಮಾತನಾಡಿಸಲು ಹೋದರೆ ಮಾತನಾಡುತ್ತಿರಲಿಲ್ಲ.

ಮನೆಯ ಸದಸ್ಯರಾದ ಶಮಂತ್, ರಘು, ವೈಷ್ಣವಿ, ಚಕ್ರವರ್ತಿ, ದಿವ್ಯ ಉರುಡುಗ, ಅರವಿಂದ್ ಹಾಗೂ ಶುಭಾ ಪೂಂಜ ಅವರನ್ನು ಪ್ರಶಾಂತ್ ಎಷ್ಟೇ ಮಾತನಾಡಿಸಲು ಪ್ರಯತ್ನಪಟ್ಟರೂ ಅವರು ಮಾತನಾಡಲೇ ಇಲ್ಲ. ಇದರಿಂದ ವಿಚಲಿತರಾದ ಸಂಬರಗಿ, ‘ಬಿಗ್ಬಾಸ್ ಪ್ರಾಂಕ್ ಮಾಡುತ್ತಿದ್ದರೆ ಸರಿ. ನೀವೇ ಮಾಡುತ್ತಿದ್ದರೆ ನಿಮ್ಮ ನಾಟಕ ನಿಲ್ಲಿಸಿ’ ಎಂದು ಗೋಗರೆದರೂ ಯಾವ ಸ್ಪರ್ಧಿಯು ತಲೆಕೆಡಿಸಿಕೊಳ್ಳಲಿಲ್ಲ.
ಶಮಂತ್ ಅವರ ಚೊಂಬು ಬಚ್ಚಿಟ್ಟ ಪ್ರಶಾಂತ್, ಶುಭಾ ಪೂಂಜ ಕೂದಲಿಗೆ ಎಣ್ಣೆ ಹಚ್ಚಲು ಪ್ರಯತ್ನಪಟ್ಟರು, ಚಕ್ರವರ್ತಿಯವರಿಗೆ ಶೇವಿಂಗ್ ಮಾಡಿದರೂ ಯಾರೂ ಮಾತನಾಡಲಿಲ್ಲ. ಬಳಿಕ ದಿವ್ಯ ಉರುಡುಗ ಬಳಿ ತೆರಳಿ ‘ನನ್ನನ್ನು ನೋಡು ನನ್ನನ್ನು ಕಣ್ಣು ಬಿಟ್ಟು ನೋಡು. ನೀನು ನನ್ನ ತಂಗಿ ಯಾಕೆ ನಾಟಕ ಮಾಡ್ತೀಯಾ?’ ಎಂದೆಲ್ಲಾ ಪ್ರಶ್ನಿಸಿದರು. ಆದರೂ ದಿವ್ಯಾ ತಲೆ ತಿರುಗುತ್ತಿದೆ ಎಂದು ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರು.
ಮನೆಯವರ ಈ ವರ್ತನೆಯಿಂದ ಬೇಸತ್ತ ಪ್ರಶಾಂತ್, ಶುಭಾ ಪೂಂಜ ಬಳಿ ಕಣ್ಣೀರು ಹಾಕಿದರು. ಈ ವೇಳೆ ಶುಭ ಅವರಿಗೆ ಮನಸ್ಸು ಚುರುಕ್ ಎಂದಿತಂತೆ. ಇದೆಲ್ಲಾ ಮುಗಿದ ನಂತರ ಚಕ್ರವರ್ತಿ ಚಂದ್ರಚೂಡ, ವೈಷ್ಣವಿ, ರಘು ಕ್ಯಾಮರಾ ಮುಂದೆ ಬಂದು, ‘ದಯವಿಟ್ಟು ಇಲ್ಲೊಂದು ನೆಗೆಟಿವ್ ಎನರ್ಜಿ ಇದೆ. ಅದನ್ನು ಹೋಗಿಸಬೇಕು’ ಎಂದು ಕೇಳಿಕೊಂಡರು. ಸಂಜೆಯಾಗುತ್ತಿದ್ದಂತೆ ಬಿಗ್ಬಾಸ್ ಪ್ರಶಾಂತ್ ಇನ್ವಿಸಿಬಲ್ ಆಟವನ್ನು ಮುಗಿಸಿದರು.