ಉದಯ ವಾಹಿನಿಯಲ್ಲಿ ಫ್ರೇಮ್ಸ್ ನಿರ್ಮಾಣ ಸಂಸ್ಥೆ 'ಅಮ್ನೋರು' ಎಂಬ ಶೀರ್ಷಿಕೆಯನ್ನು ಹೊತ್ತು ದೈವ ಮತ್ತು ದುಷ್ಟ ಶಕ್ತಿಯಾಧಾರಿತ ಧಾರಾವಾಹಿಯನ್ನು ಹೊರ ತರುತ್ತಿದೆ. ಈ ಧಾರಾವಾಹಿಯಲ್ಲಿ ರುದ್ರ ಎನ್ನುವ ಎಲ್ಲರಿಗೂ ಒಳಿತು ಬಯಸುವ ಆತ್ಮ 27 ವರ್ಷಗಳಿಂದ ಮತ್ತೆ ಪುನರ್ಜನ್ಮ ಪಡೆದು ಬರುವ ಜೋಡಿಗಾಗಿ ಕಾಯುತ್ತಿರುತ್ತದೆ. ಅಂದ ಹಾಗೆ ರುದ್ರ ಎಂಬ ಈ ಪಾತ್ರ ಮಾಡಿರುವುದು ಹರ್ಷಿತಾ ಎಂಬ ನಟಿ.
'ಕಾರ್ತಿಕ ದೀಪ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನಾ ಪಯಣ ಆರಂಭಿಸಿದ ಹರ್ಷಿತಾ, ಮುಂದೆ ಮೇಘ ಮಯೂರಿ, ಚಂದನದ ಗೊಂಬೆ, ಮಡದಿ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹರ್ಷಿತಾ ಅವರ ನಟನಾ ಯಾನ ಕೇವಲ ಕನ್ನಡ ಭಾಷೆಗೆ ಮಾತ್ರ ಸೀಮಿತವಲ್ಲ, ಬದಲಿಗೆ ತಮಿಳು ಮತ್ತು ತೆಲುಗು ಭಾಷೆಯ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಮಹಾನಗರಿ ಬೆಂಗಳೂರಿನ ಹುಡುಗಿ ಹರ್ಷಿತಾ, ರಂಗಭೂಮಿ ಕಲಾವಿದೆ ಕೂಡಾ ಹೌದು. ಬೆಂಗಳೂರಿನ ದೃಶ್ಯರಂಗ ನಾಟಕ ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹರ್ಷಿತಾ, ಸ್ವಪ್ನವಾಸವದತ್ತ, ವರ್ಷಗೀತೆ, ಮರುಗದಾಲು, ನಾನು ಮತ್ತು ಹೆಣ್ಣು, ಪೇಯಿಂಗ್ ಗೆಸ್ಟ್ ಸೇರಿದಂತೆ ಹಲವು ನಾಟಕಗಲ್ಲಿ ಅಭಿನಯಿಸಿದ್ದಾರೆ. ನಟನೆ ಜೊತೆಗೆ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಹರ್ಷಿತಾಗೆ ಇಷ್ಟವಾಗುವ ಕಥೆ ಮತ್ತು ಪಾತ್ರ ಸಿಕ್ಕಿದರೆ ಹಿರಿತೆರೆಗೆ ಬರಲು ಕೂಡಾ ಸಿದ್ಧರಾಗಿದ್ದಾರೆ.
ರಮೇಶ್ ಇಂದಿರಾ ಈ 'ಅಮ್ನೋರು' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಪರಮಭಕ್ತರಾದ ಶಂಕರ ಹಾಗೂ ದಾಕ್ಷಾಯಿಣಿ ಎಂಬುವವರು ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹವನ್ನು ಮತ್ತು ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ, ಮಾಟಗಾರರಾದ ಧನಶೇಖರ್ ಮತ್ತು ಶಂಕರನ ಸಹೋದರ ವರದಪ್ಪನಿಂದ ಪ್ರಾಣ ಕಳೆದುಕೊಂಡಿರುತ್ತಾರೆ. ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿ ಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡಿಕೊಂಡು ಪುನರ್ಜನ್ಮ ಪಡೆದು ಬರುವ ದಂಪತಿಗಾಗಿ ಕಾಯುತ್ತಿರುತ್ತದೆ. ಆದರೆ ಧನಶೇಖರ್ ವರದಪ್ಪ ಜೊತೆ ಸೇರಿ ರುದ್ರಾಕ್ಷಿ ಮಾಲೆ ಹಾಗೂ ಅಮ್ನೋರ ವಿಗ್ರಹವನ್ನು ತಮ್ಮದಾಗಿಸಿಕೊಳ್ಳಲು ಸಂಚು ರೂಪಿಸುತ್ತಾರೆ. ಶಂಕರ ಹಾಗೂ ದಾಕ್ಷಾಯಿಣಿ ಮತ್ತೆ ಹುಟ್ಟಿ ಬರಲಿದ್ದಾರಾ..? ಮುಂದೆ ಧಾರಾವಾಹಿ ಹೇಗೆ ಸಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.