ಕಿರುತೆರೆ ನಟ ರಾಜೇಶ್ ನಟರಂಗ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ನಾಯಕ ತ್ರಿವಿಕ್ರಮ್ ಆಗಿ ನಟಿಸಿದ್ದ ರಾಜೇಶ್ ನಟರಂಗ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅದು ಕೂಡಾ ನಾಯಕನಾಗಿ.
ಇಲ್ಲಿಯ ತನದ ಅದೆಷ್ಟೋ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಜೇಶ್, ಚೊಚ್ಚಲ ಬಾರಿಗೆ ನಾಯಕನಾಗಿ ತೆರೆಯ ಮೇಲೆ ಬರಲಿದ್ದಾರೆ. 'ಓಬಿರಾಯನ ಕಥೆ' ಸಿನಿಮಾದಲ್ಲಿ ನಾಯಕನಾಗಿ ಮಿಂಚಲಿರುವ ರಾಜೇಶ್ ಫೋಟೋಗ್ರಾಫರ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಪ್ರಬುದ್ಧ ನಟನೆಯ ಮೂಲಕ ಮನೆ ಮಾತಾಗಿರುವ ರಾಜೇಶ್ ಕೇವಲ ಬೆಳ್ಳಿತೆರೆ ಮಾತ್ರವಲ್ಲ, ಕಿರಿತೆರೆಯಲ್ಲೂ ಕೂಡಾ ತಮ್ಮ ಮನೋಜ್ಞ ಅಭಿನಯದ ಮೂಲಕ ಮನಗೆದ್ದವರು. ಅಂದ ಹಾಗೆ, ನಟರಂಗ ಎಂಬುದು ರಂಗಸಂಸ್ಥೆಯ ಹೆಸರು. ಇವರು ಪದವಿ ಕಲಿಯುತ್ತಿರುವಾಗಲೇ ನಟನೆಯತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದು, ಮುಂದೆ ನಾಟಕಗಳಲ್ಲಿಯೂ ಅಭಿನಯಿಸಿದರು. ನಟರಂಗ ಸಂಸ್ಥೆಯ ಮೂಲಕ ರಂಗನಂಟು ಆರಂಭಿಸಿದ ಕಾರಣದಿಂದಲೂ ಏನೋ ಅವರಿಗೆ ಆ ಸರ್ ನೇಮ್ ಖಾಯಂ ಆಯಿತು.
ಅದೆಷ್ಟೋ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ರಾಜೇಶ್ ಸ್ಮಶಾನ, ಕುರುಕ್ಷೇತ್ರ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮಾಯಾಮೃಗ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಇವರು ಮುಂದೆ ಮುಕ್ತ, ಬದುಕು, ಶಕ್ತಿ, ಗುಪ್ತ ಗಾಮಿನಿ, ನಾನೂ ನನ್ನ ಕನಸು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇಷ್ಟು ದಿನ ಪೋಷಕ ಪಾತ್ರಗಳಲ್ಲಿ ನೋಡುತ್ತಿದ್ದ ರಾಜೇಶ್ ಅವರನ್ನು ಇದೀಗ ನಾಯಕನಾಗಿ ನೋಡುವ ಸದಾವಕಾಶ ವೀಕ್ಷಕರಿಗೆ ಲಭಿಸಿದೆ.