ಇಂದು ಮಕ್ಕಳ ದಿನಾಚರಣೆ. ಜೀ ಕನ್ನಡ ವಾಹಿನಿ ವಿಶೇಷವಾಗಿ ಈ ದಿನವನ್ನು ಆಚರಣೆ ಮಾಡಿ ಪ್ರಸಾರ ಮಾಡುತ್ತಿದೆ. ಜೀ ಕನ್ನಡ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಂಡ್ಯ ಹಾಗೂ ಗದಗ ನಗರಳಿಗೆ ಭೇಟಿ ನೀಡಿ ‘ಬಣ್ಣಿಸು’ ಎಂಬ ಕಾರ್ಯಕ್ರಮ ಮಾಡಿ ಯುವ ಪೀಳಿಗೆಗೆ ಪ್ರೋತ್ಸಾಹ ನೀಡಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಿತ್ರಗಳನ್ನು ಬರೆಸಲಾಗಿದೆ.
ಮನರಂಜನೆ ಮತ್ತು ಶಿಕ್ಷಣದ ಶುದ್ಧ ಮಿಶ್ರಣವಾಗಿರುವ ಇದು ಸೃಜನಾತ್ಮಕತೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ನಮ್ಮ ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಪರಿಸರ ರಕ್ಷಿಸಿ' ತತ್ವ ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು.
ಮಂಡ್ಯ ಮತ್ತು ಗದಗದ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಿತ್ತು. ಇದರೊಂದಿಗೆ ವಾಹಿನಿ ಇಂದಿನ ಯುವಪೀಳಿಗೆಗೆ ಸ್ಫೂರ್ತಿ ನೀಡಿತು. ಸರ್ಕಾರಿ ಶಾಲೆಯ 1ರಿಂದ 5ನೇ ತರಗತಿಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು.
ಇನ್ನು ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾಮಿಡಿ ಕಿಲಾಡಿಗಳು ಸೀಸನ್-2 ರ ಮಡೇನೂರು ಮನು, ಕಾಮಿಡಿ ಕಿಲಾಡಿಗಳು ಸೀಸನ್-2ರ ಮಂಥನ ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14ರ ಸೃಜನ್ ಪಟೇಲ್ ಮಂಡ್ಯದಲ್ಲಿ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗಿಯಾಗಿದ್ದರು.
ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಗಮಪ ಸೀಸನ್ 11ರ ಶ್ರೀ ರಾಮ್ ಕಸರ್ ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16ರ ಸಂಗೀತಾ ತೀರ್ಪುಗಾರರಾಗಿದ್ದರು.