ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಗಲಿ 11 ವರ್ಷಗಳ ಬಳಿಕ ಕೊನೆಗೂ ಅವರು ಜನಿಸಿದ ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಇಂದು ಚಾಲನೆ ದೊರೆತಿದೆ. ಸ್ಮಾರಕ ನಿರ್ಮಾಣವಾಗುವ ಸ್ಥಳದಲ್ಲಿ ಏನು ಇರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
![Dr. Visnhuvardhan memorial](https://etvbharatimages.akamaized.net/etvbharat/prod-images/kn-mys-2-drvishnuvardhan-memorial-inauguration-story-7208092_15092020121556_1509f_1600152356_52.jpg)
ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ರಸ್ತೆಯ ಉದೂರು ಗೇಟ್ ಬಳಿಯ ಹಾಲಾಳುವಿನಲ್ಲಿ ಸುಮಾರು 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದ್ದು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಆನ್ಲೈನ್ ಮೂಲಕ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಜೊತೆಗೆ ಇಂದಿನ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ಅನಿರುದ್ಧ್ , ಕೀರ್ತಿ ವಿಷ್ಣುವರ್ಧನ್ ಹಾಗೂ ಕುಟುಂಬದವರು ಪಾಲ್ಗೊಂಡಿದ್ದಾರೆ.
ಮಾಧ್ಯಮಗಳೊಂದಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹಲವು ವರ್ಷಗಳ ನಂತರ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದ ಹೇಳುತ್ತೇನೆ. ಬಿಎಸ್ವೈ ಅವರು ಬಹಳ ಅಭಿಮಾನ ಮತ್ತು ಆತ್ಮೀಯತೆಯಿಂದ ಈ ಕೆಲಸ ಶೀಘ್ರದಲ್ಲೇ ನಡೆಯಬೇಕು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಬಿಎಸ್ವೈ ಅವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
![Dr. Visnhuvardhan memorial](https://etvbharatimages.akamaized.net/etvbharat/prod-images/kn-mys-2-drvishnuvardhan-memorial-inauguration-story-7208092_15092020121556_1509f_1600152356_947.jpg)
ಇದೇ ತಿಂಗಳ ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ 70 ನೇ ಹುಟ್ಟುಹಬ್ಬವಿದ್ದು ಅದಕ್ಕೂ ಮೂರು ದಿನ ಮೊದಲೇ ಸ್ಮಾರಕ ಭೂಮಿ ಪೂಜೆ ನಡೆದಿದೆ. ವಿಷ್ಣುವರ್ಧನ್ ಅವರು ತಮ್ಮ ಬದುಕನ್ನು ಕಲೆಗಾಗಿ ಮುಡುಪಾಗಿಟ್ಟಿದ್ದರು. ಸ್ಮಾರಕದ ಜೊತೆಗೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಇಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಸಾಕಷ್ಟು ಕಲಾವಿದರಿಗೆ ಮಾರ್ಗದರ್ಶನ ಸಿಗಲಿದೆ ಜೊತೆಗೆ ನಾಟಕ ತರಬೇತಿ ಶಾಖೆಯೂ ಆರಂಭವಾಗಲಿದೆ ಎಂದು ಅನಿರುದ್ಧ್ ತಿಳಿಸಿದ್ದಾರೆ.
ಸರ್ಕಾರ ಈ ಸ್ಮಾರಕಕ್ಕೆ ಒಟ್ಟು 11 ಕೋಟಿ ಘೋಷಿಸಿದೆ. ಸ್ಮಾರಕದ ಒಟ್ಟು ಜಾಗ 5.5 ಎಕರೆ ಇದ್ದು, 2 ಎಕರೆ ಜಾಗದಲ್ಲಿ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿ ತಲೆ ಎತ್ತಲಿದೆ. ವಸ್ತು ಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ ಹಾಗೂ ಚಿತ್ರೋತ್ಸವಗಳು ನಡೆಯುವಂತಹ ವೇದಿಕೆಗಳು ಇಲ್ಲಿ ಇರಲಿವೆ. ವಿಷ್ಣುವರ್ಧನ್ ಅವರ ಅಪರೂಪದ ಫೋಟೋಗಳು, ಅವರು ಬಳಸುತ್ತಿದ್ದ ಬಟ್ಟೆಗಳು, ಪ್ರಶಸ್ತಿಗಳು ಹಾಗೂ ಇತರ ವಸ್ತುಗಳು ಎಲ್ಲವನ್ನೂ ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ. ಇವೆಲ್ಲಾ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಲಿದೆ ಎಂದು ಅನಿರುದ್ಧ್ ತಿಳಿಸಿದ್ದಾರೆ.
![Dr. Visnhuvardhan memorial](https://etvbharatimages.akamaized.net/etvbharat/prod-images/kn-mys-2-drvishnuvardhan-memorial-inauguration-story-7208092_15092020121556_1509f_1600152356_82.jpg)