ಮಂಡ್ಯ: ಹಾಸ್ಯನಟರಾದ ರಂಗಾಯಣ ರಘು ಹಾಗೂ ತಬಲಾ ನಾಣಿ ಇಂದು ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಒಂದೂಕಾಲು ರೂಪಾಯಿ ಹರಕೆ ಕೂಡಾ ಕಟ್ಟಿದ್ದಾರೆ.
ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ದೇವಸ್ಥಾನಕ್ಕೆ ಬೇಟಿ ನೀಡಿದ ಇಬ್ಬರೂ ನಟರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಂಪ್ರದಾಯದಂತೆ ಒಂದೂಕಾಲು ರೂಪಾಯಿ ಹರಕೆ ಕಟ್ಟಿಕೊಂಡು ಇಷ್ಟಾರ್ಥ ಸಿದ್ದಿಸುವಂತೆ ದೇವರನ್ನು ಪ್ರಾರ್ಥಿಸಿದರು. ಇನ್ನು ಇವರಿಬ್ಬರೂ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾದಲ್ಲಿದ್ದ ಭಕ್ತರು ಸಂತೋಷ ವ್ಯಕ್ತಪಡಿಸಿದರು. ಇಷ್ಟು ದಿನ ಟಿವಿಯಲ್ಲಿ ನೋಡುತ್ತಿದ್ದ ನಟರನ್ನು ಎದುರಲ್ಲೇ ನೋಡಿದಾಗ ಜನರು ಬಹಳ ಥ್ರಿಲ್ ಆದರು. ರಂಗಾಯಣ ರಘು, ತಬಲಾ ನಾಣಿ ಇಬ್ಬರೂ ಸಾಮಾನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಮದ್ದೂರಿನ ಹೊರವಲಯದಲ್ಲಿ ಶಿಂಷಾ ನದಿ ದಂಡೆಯಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಟರು, ರಾಜಕೀಯ ನಾಯಕರು ಕೂಡಾ ಆಗಮಿಸುತ್ತಾರೆ.