ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ನಿರ್ದೇಶಕರ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹೆಸರು ಮಾಡಿ, ಪ್ರಶಸ್ತಿಗಳನ್ನೂ ಪಡೆದುಕೊಂಡಿರುವ 'ಗಂಟುಮೂಟೆ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆದಿದ್ದು, ಇತ್ತೀಚೆಗೆ ನಟ ರಕ್ಷಿತ್ ಶೆಟ್ಟಿ ಕೂಡಾ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದೊಂದಿಗೆ ಸ್ವಲ್ಪ ಸಮಯ ಕಳೆದ ರಕ್ಷಿತ್ ಶೆಟ್ಟಿ, ಇಂತಹ ಸಿನಿಮಾ ಕನ್ನಡದ ಮಟ್ಟಿಗೆ ಬಹಳ ಅಪರೂಪ ಎಂದು ಹಾಡಿ ಹೊಗಳಿದ್ದಾರೆ. ಚಿತ್ರದ ನಿರ್ದೇಶಕಿ ರೂಪಾ ರಾವ್, ನಟಿ ತೇಜು ಬೆಳವಾಡಿ, ನಿಶ್ಚಿತ್ ಕೊರೋಡಿ ಹಾಗೂ ಇನ್ನಿತರರು ಈ ವೇಳೆ ಹಾಜರಿದ್ದರು. ಇದಕ್ಕೂ ಮುನ್ನ ನಿರ್ದೇಶಕ ಹೇಮಂತ್ ರಾವ್ ಕೂಡಾ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 1990ರ ದಶಕದ ಹೈಸ್ಕೂಲ್ ಓದುವ ಹುಡುಗ, ಹುಡುಗಿ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪರಭಾಷೆ ಚಿತ್ರಗಳ ನಡುವೆ ಇಂತಹ ಒಂದು ಕನ್ನಡ ಸಿನಿಮಾ ಪೈಪೋಟಿ ನೀಡಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.