ಪ್ರತಿದಿನ ಹೊಸ ಹೊಸ ನಟರು, ನಿರ್ದೇಶಕರು ಸ್ಯಾಂಡಲ್ವುಡ್ನಲ್ಲಿ ತಮ್ಮ ಅದೃಷ್ಟ ಅರಸಿಕೊಂಡು ಬರುತ್ತಿದ್ದಾರೆ. ಕೆಲವರಿಗೆ ಸುಲಭವಾಗಿ ಅವಕಾಶ ದೊರೆತರೆ ಮತ್ತೆ ಕೆಲವರಿಗೆ ಎಷ್ಟು ಕಷ್ಟಪಟ್ಟರೂ ಅವಕಾಶ ಲಭಿಸುವುದಿಲ್ಲ. ಆದರೆ ಕೆಲವರು ಸಿಕ್ಕ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡು ಬೆಳವಣಿಗೆ ಕಂಡಿದ್ದಾರೆ.
ಕನ್ನಡದಲ್ಲಿ ಜನಪ್ರಿಯತೆಯನ್ನು ಕಾಪಾಡಿಕೊಂಡು ಜೊತೆಗೆ ಉತ್ತಮ ಅಭಿನಯ ನೀಡುತ್ತಿರುವ ನಟಿ ಶಾನ್ವಿ ಶ್ರೀವಾತ್ಸವ್ ಹೊಸಬರೊಂದಿಗೆ ನಟಿಸಲು ಕೂಡಾ ಓಕೆ ಅಂದಿದ್ದಾರೆ. ದರ್ಶನ್, ಯಶ್, ಗಣೇಶ್, ಶ್ರೀ ಮುರಳಿ, ಚಿರಂಜೀವಿ ಸರ್ಜಾ ಅವರಂಥ ದೊಡ್ಡ ನಟರೊಂದಿಗೆ ನಾಯಕಿ ಆಗಿ ಅಭಿನಯಿಸಿರುವ ಈ ಚೆಲುವೆ ಈಗ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ ನಾರಾಯಣ’ ಗಣೇಶ್ ಜೊತೆ ಗೀತಾ, ಉಪೇಂದ್ರ ಹಾಗೂ ರವಿಚಂದ್ರನ್ ಅಭಿನಯದ ‘ರವಿಚಂದ್ರ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟಾದರೂ ಶಾನ್ವಿ ರೋಹಿತ್ ರಾವ್ ನಿರ್ದೇಶನದ ಚೊಚ್ಚಲ ಚಿತ್ರ 'ರಣಾಂಗಣ’ದಲ್ಲಿ ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ ಜೊತೆ ಅಭಿನಯಿಸಲು ಒಪ್ಪಿದ್ದಾರೆ. ಕಥೆ ಬಗ್ಗೆ ಹೆಚ್ಚು ಗಮನ ಹರಿಸುವ ಶಾನ್ವಿ ನಾಯಕರ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಯದ್ಧದ ಹಿನ್ನೆಲೆ ಇರುವ ಕಥೆ ಹೊಂದಿದ್ದು ನಾಯಕ ಸೈನಿಕನ ಪಾತ್ರ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರೋಹಿತ್ ಹೇಳಿದ್ದಾರೆ.