ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಭೂಮಿ ಪೂಜೆ ನೆರವೇರಿಸಿದ್ದಾರೆ. ಕೋಟ್ಯಂತರ ಭಾರತೀಯರು ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ದಿನವನ್ನು ಬಹಳ ಸಡಗರದಿಂದ ಸಂಭ್ರಮಿಸಿದ್ದಾರೆ.
ಇದೇ ವೇಳೆ ಸ್ಯಾಂಡಲ್ವುಡ್ ಹಿರಿಯ ನಟ ಶ್ರೀನಿವಾಸ ಮೂರ್ತಿ ತಮ್ಮ ವೃತ್ತಿ ಜೀವನದ ಮೊದಲ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಶ್ರೀನಿವಾಸ ಮೂರ್ತಿ 1977 ರಲ್ಲಿ ಬಿಡುಗಡೆಯಾದ ದಿಗ್ಗಜ ಸಿದ್ದಲಿಂಗಯ್ಯ ನಿರ್ದೇಶನದ 'ಹೇಮಾವತಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದವರು. ಇದು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಸಿನಿಮಾ. ಈ ಚಿತ್ರದಲ್ಲಿ ಶ್ರೀರಾಮನವಮಿಯ ಸನ್ನಿವೇಶ ಬರುತ್ತದೆ.
ಚಿತ್ರದಲ್ಲಿ ಉದಯಕುಮಾರ್, ಸಮಾಜದಲ್ಲಿ ಮೇಲ್ಜಾತಿಯವರಿಂದ ದೂರ ತಳ್ಳಲ್ಪಟ್ಟವರೊಂದಿಗೆ ವಿರೋಧದ ನಡುವೆಯೂ ಶ್ರೀರಾಮನವಮಿ ಆಚರಣೆ ಮಾಡುವ ಸನ್ನಿವೇಶವಿದೆ. ಈ ದೃಶ್ಯದ ಚಿತ್ರೀಕರಣಕ್ಕಾಗಿ ಪುರಾತನ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಇರುವ ಫೋಟೋ ಬೇಕಿರುತ್ತದೆ. ಹೊಳೆನರಸೀಪುರದಲ್ಲಿ ಚಿತ್ರೀಕರಣ ನಡೆಯುವ ವೇಳೆ ನಿರ್ಮಾಪಕ ಎನ್. ವೀರಸ್ವಾಮಿ ಅವರ ಅನುಮತಿ ಪಡೆದು ಚಿತ್ರದ ಸಹ ನಿರ್ಮಾಪಕ ಚಂದೂಲಾಲ್ ಜೈನ್ ಹಾಗೂ ನಟ ಶ್ರೀನಿವಾಸಮೂರ್ತಿ ಸೇರಿ ಆ ರೀತಿಯ ಫೋಟೋಗಾಗಿ ಹುಡುಕಾಟ ನಡೆಸುತ್ತಾರೆ. ಒಬ್ಬರ ಮನೆಯಲ್ಲಿ ಸುಮಾರು 250 ವರ್ಷದ ಹಿಂದಿನ ಫೋಟೋ ಇರುವುದು ತಿಳಿದು ಮನೆ ಹಿರಿಯರ ಬಳಿ ಮನವಿ ಮಾಡಿ ಚಿತ್ರೀಕರಣಕ್ಕಾಗಿ ಆ ಫೋಟೋವನ್ನು ತರುತ್ತಾರೆ.
![Hemavati movie shooting](https://etvbharatimages.akamaized.net/etvbharat/prod-images/hemavathi-old-kannada-film1596681215319-6_0608email_1596681226_250.jpg)
ಪಿ.ಬಿ. ಶ್ರೀನಿವಾಸ್ ಹಾಡಿದ್ದ 'ಶ್ರೀ ರಾಮ..ಗುಣದಲ್ಲಿ ಸೋದರ ವಾತ್ಸಲ್ಯ' ಕಂಡೆ ಎಂಬ ಹಾಡಿನ ಚಿತ್ರೀಕರಣದ ವೇಳೆ ಗಲಭೆ ಉಂಟಾಗುವ ಸನ್ನಿವೇಶದಲ್ಲಿ ಆ ಫೋಟೋ ಗಾಜು ಒಡೆಯುತ್ತದೆ. ತಕ್ಷಣ ಶ್ರೀನಿವಾಸಮೂರ್ತಿ ಹಾಗೂ ಚಂದೂಲಾಲ್ ಜೈನ್ ಆ ಫೋಟೋವನ್ನು ಹಾಸನಕ್ಕೆ ಕೊಂಡೊಯ್ದು ಹೊಸ ಗ್ಲಾಸ್ ಹಾಕಿಸಿ ತರುತ್ತಾರೆ. ಅಷ್ಟರಲ್ಲಿ ಫೋಟೋ ಗಾಜು ಒಡೆದಿರುವ ವಿಚಾರ ಆ ಮನೆಯವರಿಗೆ ತಿಳಿದುಹೋಗುತ್ತದೆ.
ಪೋಟೋವನ್ನು ಮಾಲೀಕರಿಗೆ ವಾಪಸ್ ನೀಡಲು ಹೋದಾಗ ಆ ಹಿರಿಯ ವ್ಯಕ್ತಿ ಇದು ಅಶುಭ ಎಂದು ಬೇಸರ ಮಾಡಿಕೊಂಡು ಶ್ರೀನಿವಾಸ ಮೂರ್ತಿ ಹಾಗೂ ಚಂದೂಲಾಲ್ ಜೈನ್ ಅವರನ್ನು ಬೈಯ್ಯುವುದಲ್ಲದೆ, ಚಿತ್ರದ ಬಗ್ಗೆ ಶಾಪ ಹಾಕಿದಂತೆ. ಈ ಶಾಪ ನನಗೆ ಇಂದಿಗೂ ನೆನಪಿದೆ. ಬಹುಶ: ಆ ಕಾರಣದಿಂದಲೇ 'ಹೇಮಾವತಿ' ಚಿತ್ರ ಗೆಲ್ಲಲಿಲ್ಲ. ಬಿಡುಗಡೆಯಾದ ದಿನ ಅಲಂಕಾರ್ ಚಿತ್ರಮಂದಿರಕ್ಕೆ ಕೇವಲ 17 ಜನರು ಮಾತ್ರ ಬಂದಿದ್ದರು ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ಶ್ರೀನಿವಾಸ ಮೂರ್ತಿ.
![Hemavati movie shooting](https://etvbharatimages.akamaized.net/etvbharat/prod-images/udayakumar1596681215320-11_0608email_1596681226_28.jpg)
ನಂತರದ ದಿನಗಳಲ್ಲಿ ಸಿದ್ದಲಿಂಗಯ್ಯ ಅವರೊಂದಿಗೆ ಅನೇಕ ಸಿನಿಮಾಗಳನ್ನು ಶ್ರೀನಿವಾಸ ಮೂರ್ತಿ ಮಾಡಿದ್ದಾರೆ. ಈಗಲೂ ಅವರ ಮನೆಯ ದೇವರ ಕೋಣೆಯಲ್ಲಿ ಸಿದ್ದಲಿಂಗಯ್ಯ ಪೋಟೋ ಇದೆಯಂತೆ. ಸುಮಾರು 108 ದಿನಗಳ ಕಾಲ ಚಿತ್ರೀಕರಣ ಮಾಡಿದ 'ಹೇಮಾವತಿ' ಚಿತ್ರಕ್ಕೆ ತಾಂತ್ರಿಕ ಸ್ಪರ್ಶ ಅಳವಡಿಸಿ ಈಗಲೂ ಬಿಡುಗಡೆ ಮಾಡಿದರೆ ಸಿನಿಪ್ರಿಯರು ಇಷ್ಟಪಡುತ್ತಾರೆ ಎಂದು ಶ್ರೀನಿವಾಸ ಮೂರ್ತಿ ಹೇಳುತ್ತಾರೆ.