'ದಾರಿ ಯಾವುದಯ್ಯಾ ವೈಕುಂಠಕೆ' ಇದು ಪುರಂದರದಾಸರು ಹಾಡಿದ ಸಾಲುಗಳು. ಇದೀಗ ಈ ಹೆಸರಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಖ್ಯಾತ ನಿರ್ದೇಶಕ, ನಟ ರಿಷಭ್ ಶೆಟ್ಟಿ ಈ ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಶ್ರೀ ಬಸವೇಶ್ವರ ಕ್ರಿಯೇಷನ್ ಬ್ಯಾನರ್ ಅಡಿ ಶರಣಪ್ಪ ಎಂ. ಕೋಟಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. 30 ದಿನಗಳಲ್ಲಿ ಬೆಂಗಳೂರು, ರಾಮನಗರ, ಮಂಡ್ಯ ಸುತ್ತ ಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ. 'ಕೃಷ್ಣ ಗಾರ್ಮೆಂಟ್ಸ್' ಚಿತ್ರವನ್ನು ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಯಾವುದೇ ಕೆಲಸ ಇಲ್ಲದೆ, ಉಂಡಾಡಿ ಗುಂಡನಂತೆ ತಿರುಗುವ ಯುವಕನೊಬ್ಬ ಆಕಸ್ಮಿಕವಾಗಿ ಸ್ಮಶಾನಕ್ಕೆ ಭೇಟಿ ನೀಡುತ್ತಾನೆ. ಅಲ್ಲಿಗೆ ಹೋಗಿಬಂದ ಮೇಲೆ ಅವರ ಜೀವನದಲ್ಲಿ ಬದಲಾವಣೆ ಆರಂಭವಾಗುತ್ತದೆ. ಇದು ಈ ಚಿತ್ರದ ಕಥೆ.
ಸಾಕಷ್ಟು ಸಿನಿಮಾಗಳಲ್ಲಿ ಖಳನಟ ಆಗಿ 'ಹಫ್ತಾ' ಚಿತ್ರದ ಮೂಲಕ ನಾಯಕನಾದ ವರ್ಧನ್ ತೀರ್ಥಹಳ್ಳಿ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 'ತಿಥಿ' ಖ್ಯಾತಿಯ ಪೂಜಾ ಈ ಚಿತ್ರದ ನಾಯಕಿ. ಉಳಿದಂತೆ ಬಲರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್ ರಾವ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.