ಕಳೆದ ವರ್ಷ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರದಲ್ಲಿ 'ಗುಳ್ಟು' ಕೂಡಾ ಒಂದು. ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ನಟಿಸಿದ್ದರೆ, ಹೊಸ ಪ್ರತಿಭೆ ನವೀನ್ ಶಂಕರ್ ನಾಯಕನಾಗಿ ನಟಿಸಿ ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿದ್ದರು.
'ಗುಳ್ಟು' ಯಶಸ್ವಿ 50 ದಿನಗಳನ್ನು ಪೂರೈಸಿದ್ದರೂ ಕೂಡಾ ನವೀನ್ಗೆ ಒಳ್ಳೆಯ ಆಫರ್ ಸಿಕ್ಕಿರಲಿಲ್ಲ. ಇದೀಗ ಅವರು ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದು, ನಿನ್ನೆ ಸಿನಿಮಾದ ಮುಹೂರ್ತ ನೆರವೇರಿದೆ. ಜೆ.ಪಿ. ನಗರದ ಸತ್ಯ ಗಣಪತಿ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ ಆಗಮಿಸಿ ಕ್ಯಾಮರಾ ಚಾಲನೆ ಮಾಡಿದರೆ, ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಸೆಟ್ಟೇರಿದೆ. ಪೂರಿ ಜಗನ್ನಾಥ್ ಶಿಷ್ಯ ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಐಶಾನಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.