ಒಕ್ಕಲಿಗರ ವಿದ್ಯಾಸಂಸ್ಥೆಯ ಕಾರ್ಯಕ್ರಮದಲ್ಲಿ ಕಣ್ ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅವರು ಕಳೆದ ಎರಡು ದಿನಗಳ ಹಿಂದೆ ಸುದೀರ್ಘವಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಾರ್ಯಕ್ರಮಕ್ಕೆ ಪ್ರಿಯಾ ವಾರಿಯರ್ ಅವರನ್ನು ಕರೆದುಕೊಂಡು ಬಂದ್ದ ನಿರ್ಮಾಪಕ ಕೆ. ಮಂಜು ಅವರ ಬಗ್ಗೆಯೂ ಜಗ್ಗೇಶ್ ಅಸಮಾಧಾನ ಹೊರ ಹಾಕಿದ್ದರು. ಈ ಬೆಳವಣಿಗೆಗಳ ಬಗ್ಗೆ ಕೆ.ಮಂಜು ಪ್ರತಿಕ್ರಿಯಿಸಿದ್ದು ಜಗ್ಗೇಶ್ ನಡೆಯನ್ನು ಟೀಕಿಸಿದ್ದಾರೆ.
ಬಿಜಿಎಸ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ನಟ ಜಗ್ಗೇಶ್, ನಿರ್ದೇಶಕ ಓಂ ಸಾಯಿ ಪ್ರಕಾಶ್, ಪ್ರಿಯಾ ಪ್ರಕಾಶ್ ವಾರಿಯರ್ ಇದ್ದರು. ಪ್ರಿಯಾ ವಾರಿಯರ್ ಎಂದಾಗ ವಿದ್ಯಾರ್ಥಿಗಳು ಕೇಕೆ ಹಾಕಿ ಸ್ವಾಗತಿಸಿದ್ದಾರೆ. ಅದು ಜಗ್ಗೇಶ್ಗೆ ಏನನ್ನಿಸಿದೆಯೋ ನನಗೆ ತಿಳಿದಿಲ್ಲ. ಯಾವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ? ಯಾವಾಗ ಯಾವ ಕಲಾವಿದರಿಗೆ ಜನ ಪ್ರೋತ್ಸಾಹ ಕೊಡ್ತಾರೆ ಗೊತ್ತಿಲ್ಲ. ಜನ ಅವರನ್ನ ಬೆಳೆಸಿದ್ದಾರೆ. ಅವರು ಬೆಳೆಯುತ್ತಿದ್ದಾರೆ, ಖುಷಿ ಪಡಬೇಕು ಎಂದರು.
ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪಲ್ಲ. ಯಾಕಂದ್ರೆ ಅಲ್ಲಿ ಎಲ್ಲಾ ಭಾಷೆಯ ಏಳೆಂಟು ಸಾವಿರ ವಿದ್ಯಾರ್ಥಿಗಳಿದ್ದರು. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಹ ಸಮಯದಲ್ಲಿ ಆ ನಟಿಗೆ ಪ್ರೋತ್ಸಾಹ ಕೊಟ್ಟಾಗ ನಾವು ಖುಷಿಪಡಬೇಕು. ಎಷ್ಟೋ ಸಲ ಕೋಟ್ಯಂತರ ರೂಪಾಯಿ ಇನ್ವೆಸ್ಟ್ ಮಾಡಿ ಸಿನಿಮಾ ನಿರ್ಮಿಸುವಾಗ ನಿರ್ಮಾಪಕರನ್ನು ಜನರು ಗುರುತಿಸುವುದಿಲ್ಲ. ಆದ್ದರಿಂದ ಸಾರ್ವಜನಿಕರೊಂದಿಗೆ ಯಾವ ರೀತಿ ಬೆರೆಯಬೇಕು ಎಂಬುದು ಮುಖ್ಯ. ಜಗ್ಗೇಶ್ ಅವರು ಹಿರಿಯ ಕಲಾವಿದರು ತುಂಬಾ ತಿಳಿದವರು. ಅವರು ಆ ರೀತಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು ನನಗೆ ಸರಿ ಅನ್ನಿಸಲಿಲ್ಲ ಎಂದರು.
ಜಗ್ಗೇಶ್ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದೇನು?
ಇಂದು ಬಲವಂತಕ್ಕೆ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ. ರಾಜ್ಯ, ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲಾ. ಬರಹಗಾರ್ತಿ, ಸ್ವಂತಂತ್ರ ಹೋರಾಟಗಾರ್ತಿಯಂತೂ ಅಲ್ಲವೇ ಅಲ್ಲಾ. ಹೋಗಲಿ ನೂರು ಸಿನಿಮಾ ಮಾಡಿದ ನಟಿಯಂತೂ ಅಲ್ಲ. ಸಾಹಿತಿಯಲ್ಲ, ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ. ಆಧುನಿಕ ಮದರ್ ತೆರೆಸಾ ಅಲ್ಲ. ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ. ಕಾದಂಬರಿ ಬರೆದ ತ್ರಿವೇಣಿ ಅಲ್ಲ. ಜಾನ್ಸಿ, ಅಬ್ಬಕ್ಕ, ಕಿತ್ತೂರು ಚನ್ನಮ್ಮನಲ್ಲ. ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲ, ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣುಮಗು. ಆಕೆಯ ಹೆಸರು ಪ್ರಿಯಾ ವಾರಿಯರ್, ಕೇರಳದ ಮಗು. ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಕೆ. ಮಂಜು. ಅದು ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ.
ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ವಿದ್ಯಾದಾನಿ ಶ್ರೀ ನಿರ್ಮಲಾನಂದ ಶ್ರೀಗಳಿಗಿಂತ ಕಣ್ಣು ಹೊಡೆವ ವೀಡಿಯೋ ನಟಿ ಇಂದು ದೇವರಂತೆ ಕಂಡಳು, ಯುವಸಮಾಜಕ್ಕೆ ಎಂಥ ಶಿಕ್ಷೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">