ಚೆನ್ನೈ: ಸೂಪರ್ಸ್ಟಾರ್ ರಜಿನಿಕಾಂತ್ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡುವುದಿಲ್ಲ ಎಂದು ಡಿಸೆಂಬರ್ 28 ರಂದು ಘೋಷಿಸಿದ್ದು, ಹೆಚ್ಚಿನವರು ನಿರಾಸೆಗೊಂಡಿದ್ದಾರೆ. ಇದೀಗ ಅವರ ಅಭಿಮಾನಿಯೋರ್ವ, ರಜಿನಿಕಾಂತ್ ಅವರು ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿ ಸ್ವತಃ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದರು. ಹಾಗೆಯೇ ರಾಜಕೀಯಕ್ಕೆ ಪ್ರವೇಶಿಸದೇ ಜನರ ಸೇವೆಯನ್ನು ಮುಂದುವರೆಸುವುದಾಗಿ ಘೋಷಿಸಿದ್ದರು. ಈ ಘೋಷಣೆಯಿಂದ ಅವರ ಅಭಿಮಾನಿಗಳು ಸೇರಿದಂತೆ ಹೆಚ್ಚಿನವರಿಗೆ ಆಘಾತವನ್ನುಂಟು ಮಾಡಿದೆ. ಅನಾರೋಗ್ಯ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದು, ಜನರು ರಜಿನಿಕಾಂತ್ ಅವರಿಗೆ ಸಹಕಾರ ನೀಡಿದ್ದಾರೆ. ಇನ್ನೂ ಹಲವರು ರಾಜಕೀಯಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್: ಅಘಾತಕ್ಕೊಳಗಾಗಿ ಸಾವಿಗೀಡಾದ ಅಭಿಮಾನಿ
ನಿನ್ನೆ ಮಧ್ಯಾಹ್ನ 3.45 ಕ್ಕೆ ರಜಿನಿಕಾಂತ್ ಅವರ ಅಭಿಮಾನಿ ಮುರುಗೇಶನ್ (55) ಅವರು ರಜಿನಿ ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿ ಸ್ವತಃ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ. ಚೆನ್ನೈನ ಪೋಸ್ ಗಾರ್ಡನ್ನಲ್ಲಿರುವ ಸೂಪರ್ಸ್ಟಾರ್ ಮನೆ ಬಳಿ ಈ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: ತಲೈವಾಗೆ ‘ದೇವರ ಎಚ್ಚರಿಕೆಯ ಕರೆ’! ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡದಿರಲು ರಜನಿಕಾಂತ್ ನಿರ್ಧಾರ
ಆ ಸ್ಥಳದಲ್ಲಿ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರು ಆ ವ್ಯಕ್ತಿಯನ್ನು ತಡೆದಿದ್ದು, ನಂತರ 108 ಆ್ಯಂಬುಲೆನ್ಸ್ ಮೂಲಕ ರಾಯಪೆಟ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಮುರುಗೇಶನ್ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.