ಕಳರಿಪಯಟ್ಟು ಕಲೆಯನ್ನು ಆಧರಿಸಿ ನಿರ್ಮಿಸಿರುವ 'ದೇಹಿ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಕಲರ್ ಪುಲ್ ಕಾರ್ಯಕ್ರಮದಲ್ಲಿ ಚಿತ್ರದ ಆಡಿಯೋವನ್ನು ನಟ ವಿಜಯ ರಾಘವೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಬೆಂಗಳೂರಿನ ಚಿಕ್ಕ ಗುಬ್ಬಿಯಲ್ಲಿರುವ ಕಳರಿ ಗುರುಕುಲದ ವಿದ್ಯಾರ್ಥಿಗಳು ಕ್ರೌಡ್ ಫಂಡಿಂಗ್ ಸಂಗ್ರಹಿಸುವ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಚಿತ್ರದಲ್ಲಿ ಗುರುಕುಲಂ ವಿದ್ಯಾರ್ಥಿನಿ ಉಪಾಸನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳರಿಪಯಟ್ಟು ಹೇಳಿಕೊಡುವ ಗುರು ಪಾತ್ರದಲ್ಲಿ ಖಳನಟ ಕಿಶೋರ್ ನಟಿಸಿದ್ದಾರೆ. ಕಳರಿಪಯಟ್ಟು ಕೇವಲ ಒಂದು ಕಲೆಯಲ್ಲ ಅದು ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಕಳರಿಪಯಟ್ಟಿನ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ಧನಶೇಖರನ್ ಪ್ರಯತ್ನ ಪಟ್ಟಿದ್ದಾರೆ.
ಚಿತ್ರದಲ್ಲಿ ರಂಜನ್ ಮುಲ್ಲಾರತ್ ಎಂಬುವವರು ಕಳರಿಪಟ್ಟು ಕಲೆಯನ್ನು ಕೊರಿಯೋಗ್ರಫಿ ಮಾಡಿದ್ದಾರೆ. ಈಗಾಗಲೇ 'ದೇಹಿ' ಸಿನಿಮಾ ಶೂಟಿಂಗ್ ಮುಗಿದಿದ್ದು ಹಂಪಿ ಬೇಲೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನೀಡಿದ್ದು ಒಂದು ಹಾಡು ಹಾಗೂ ಮೂರು ಬಿಟ್ ಹಾಡುಗಳಿವೆ ಎಂದು ಸಂಗೀತ ನಿರ್ದೇಶಕ ನೊಬಿನ್ ಹೇಳಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಕಿಶೋರ್ ಹಾಗೂ ನಿರ್ದೇಶಕ ಧನಶೇಖರನ್ ಕಾರಣಾಂತರಗಳಿಂದ ಹಾಜರಾಗಿರಲಿಲ್ಲ.