ಕೊರೊನಾದಿಂದಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು, ಇಂದಿನಿಂದ ಓಪನ್ ಆಗಿದ್ದು, ನಾಳೆಯಿಂದ ಚಿತ್ರ ಪ್ರದರ್ಶನ ನಡೆಯಲಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ರಾಜ್ಯ ಸರ್ಕಾರ ಕೂಡ ಕೊರೊನಾಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಲು ಆದೇಶಿಸಿದೆ.
ಪ್ರಮುಖವಾಗಿ ಏಕ ಪರದೆ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಬೇರೆ ಬೇರೆ ಮಾರ್ಗಸೂಚಿ ಅಳವಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ :
- ಆರು ಅಡಿಗಳ ಸಾಮಾಜಿಕ ಅಂತರ
- ಮಾಸ್ಕ್ ಬಳಕೆ ಕಡ್ಡಾಯ
- ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಸ್ಯಾನಿಟೈಸರ್
- ಪ್ರದರ್ಶನಗಳ ನಡುವೆ ಸಮಯದ ಅಂತರ
- ಥರ್ಮಲ್ ಸ್ಕ್ರೀನಿಂಗ್
- ಪ್ರೇಕ್ಷಕರು ಸಾಲಾಗಿ ಬರಲು ಅವಕಾಶ
- ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನಗಳಿಗೆ ಅವಕಾಶ
- ಎರಡು ಆಸನಗಳ ಮಧ್ಯೆ ಒಂದು ಖಾಲಿ ಆಸನವಿರಬೇಕು
- ಸಂಪರ್ಕರಹಿತ ವಹಿವಾಟಿಗೆ ಆದ್ಯತೆ
- ಎಸಿಯನ್ನು 24 ಡಿಗ್ರಿಯಿಂದ 30 ಡಿಗ್ರಿ ವರೆಗೆ ಸೆಟ್ ಮಾಡಬೇಕು
- ಪ್ಯಾಕ್ ಮಾಡಿದ ಆಹಾರ, ಪಾನೀಯಕ್ಕೆ ಮಾತ್ರ ಅವಕಾಶ
ನಾಳೆ ಕೆಲವು ಸಿನಿಮಾಗಳು ರೀ ರಿಲೀಸ್ ಆಗೋದಿಕ್ಕೆ ರೆಡಿಯಾಗುತ್ತಿದೆ. ಈ ಸಿನಿಮಾಗಳಲ್ಲಿ ಚಿರು ಸರ್ಜಾ ಅಭಿನಯದ ಶಿವಾರ್ಜುನ ಕೂಡ ಇದೆ. ಕೆ ಜಿ ರಸ್ತೆಯಲ್ಲಿರೋ ಸಂತೋಷ್ ಹಾಗು ನರ್ತಕಿ ಚಿತ್ರಮಂದಿರಗಳಲ್ಲಿ ನಾಳೆ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ ಚಿರು ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರತಂಡ ಸಂತೋಷ್ ಚಿತ್ರಮಂದಿರದ ಮುಂಭಾಗ ಚಿರಂಜೀವಿ ಸರ್ಜಾ ಕಟೌಟ್ ನಿಲ್ಲಿಸಿದೆ.
ಇನ್ನು ಬಹುತೇಕ ಮಾಲ್ಗಳಲ್ಲಿ ಇಂದಿನಿಂದ ಚಿತ್ರಪ್ರದರ್ಶನ ಶುರು ಮಾಡಲು ಅಣಿಯಾಗುತ್ತಿದ್ದಾರೆ. ಲವ್ ಮಾಕ್ಟೈಲ್, ಶಿವಾಜಿ ಸೂರತ್ಕಲ್ ಸೇರಿದಂತೆ ಹಲವು ಚಿತ್ರಗಳು ರೀ ರಿಲೀಸ್ ಆಗಲಿವೆ.