ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮವು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿದೆ. ಪ್ರತಿ ವಾರವೂ ವಿಭಿನ್ನ ರೀತಿಯ ಹಾಸ್ಯದ ಮೂಲಕ ನಿರೂಪಕ ಸೃಜನ್ ಲೋಕೇಶ್ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಮಜಾ ಟಾಕೀಸ್ನಲ್ಲಿ ಈ ವಾರ ನಗುವಿಲ್ಲ, ಬದಲಿಗೆ ಕೇವಲ ಮೌನ. ಅದಕ್ಕೆ ನಿರ್ದಿಷ್ಟ ಕಾರಣವೂ ಇದೆ. ಈ ವಾರದ ಮಜಾ ಟಾಕೀಸ್ನ ಮೌನಕ್ಕೆ ಕಾರಣ ಚಿರಂಜೀವಿ ಸರ್ಜಾ ನೆನಪು.

ಇದೇ ವರ್ಷದ ಜೂನ್ ತಿಂಗಳಿನಲ್ಲಿ ನಮ್ಮನ್ನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಈಗ ಕೇವಲ ನೆನಪು ಮಾತ್ರ. ನಟನೆಯ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿದ್ದ ಚಿರಂಜೀವಿ ಸರ್ಜಾ ಸುಮಾರು ಬಾರಿ ಮಜಾ ಟಾಕೀಸ್ಗೆ ಬಂದು ಎಂಜಾಯ್ ಮಾಡಿದ್ರು. ಅಲ್ಲದೆ ಜನರಿಗೂ ಮನರಂಜನೆ ನೀಡುತ್ತಿದ್ದರು. ಇದರ ಜೊತೆಗೆ ನಾನು ಯಾವಾಗೆಲ್ಲಾ ಮಜಾ ಟಾಕೀಸ್ಗೆ ಬಂದಿದ್ದೇನೋ ಆಗೆಲ್ಲಾ ನಾನು ಹೊಟ್ಟೆ ನೋವಾಗುವಂತೆ ನಕ್ಕು ನಲಿದಿದ್ದೇನೆ ಎಂದು ಈ ಹಿಂದೆ ಚಿರಂಜೀವಿ ಸರ್ಜಾ ಹೇಳಿಕೊಂಡಿದ್ದರು. ಇಂತಿಪ್ಪ ಚಿರಂಜೀವಿ ಇದೀಗ ನಮ್ಮೊಂದಿಗಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ವಿಷಯ.


ಈ ವಾರದ ಮಜಾ ಟಾಕೀಸ್ನಲ್ಲಿ ಚಿರಂಜೀವಿ ಸರ್ಜಾ ಸವಿನೆನಪು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಹಿರಿಯ ನಟಿ ತಾರಾ, ನಟ ಶಿವರಾಜ್ ಕೆ ಆರ್ ಪೇಟೆ ಆಗಮಿಸಿ ಚಿರು ಬಗ್ಗೆ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅಂದ ಹಾಗೇ ಚಿರು, ತಾರಾ ಹಾಗೂ ಶಿವರಾಜ್ ಕೆ ಆರ್ ಪೇಟೆ ಸಿಂಗಂ ಸಿನಿಮಾದಲ್ಲಿ ನಟಿಸಿದ್ದಾರೆ. ಚಿರು ಜೊತೆಗಿನ ಸುಂದರ ನೆನಪುಗಳನ್ನು ಎಳೆಎಳೆಯಾಗಿ ತೆರೆದಿಡಲಿದ್ದಾರೆ ತಾರಾ.
