ಆರ್ಥಿಕವಾಗಿ ಬಲವಾಗಿರುವವರೆಲ್ಲ ಇಲ್ಲದವರಿಗೆ ಸಹಾಯ ಮಾಡುವುದಿಲ್ಲ. ಅಂತಹ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಕೆಲವೇ ಕೆಲವರು ಮಾತ್ರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಅಭಿಮಾನಿಗಳು ನೀಡಿದ್ದನ್ನು ಅವರಿಗಾಗಿ ಖರ್ಚು ಮಾಡುತ್ತಾರೆ. ಅಂತಹವರಲ್ಲಿ ಬಿಗ್ಬಾಸ್ ಖ್ಯಾತಿಯ ಪ್ರಥಮ್ ಕೂಡಾ ಒಬ್ಬರು.
ಇನ್ನು ಸಾಧಿಸಲು ಛಲ ಇದ್ದವರಿಗೆ ಕೆಲವೊಮ್ಮೆ ಆರ್ಥಿಕ ಸಮಸ್ಯೆ ಹಿಮ್ಮೆಟಿಸಿಬಿಡುತ್ತದೆ. ಆದರೆ ಯಾರಾದರೂ ದಾನಿಗಳು ಅವರ ಬೆನ್ನಿಗೆ ನಿಂತರೆ ಧೈರ್ಯವಾಗಿ ಮುನ್ನುಗ್ಗುತ್ತಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ ಬಡತನದ ಕಾರಣ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೆ ನಿಲ್ಲಿಸುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಪ್ರಥಮ್ ಮೇಘಾಗೆ ಹಣದ ಸಹಾಯ ಮಾಡುವ ಮೂಲಕ ಅವರು ವಿದ್ಯಾಭ್ಯಾಸ ಮುಂದುವರೆಸಲು ಕಾರಣವಾಗಿದ್ದಾರೆ. ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಉತ್ತಮ ಕೆಲಸಕ್ಕೆ ಮುಂದಾಗಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಶೇಕಡಾ 91.5 ಅಂಕ ಗಳಿಸಿದ್ದ ಮೇಘಾಗೆ ಹೆತ್ತವರ ಆರ್ಥಿಕ ಸಂಕಷ್ಟವೇ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೆ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯದಲ್ಲಿದ್ದ ಮೇಘಾಳ ವಿದ್ಯಾಭ್ಯಾಸಕ್ಕೆ ಪ್ರಥಮ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಿಗ್ಬಾಸ್ನಲ್ಲಿ ಬಂದಿದ್ದ ಐವತ್ತು ಲಕ್ಷ ರೂಪಾಯಿಯನ್ನು ಸಂಪೂರ್ಣ ಸಮಾಜಮುಖಿ ಕಾರ್ಯಗಳಿಗೆ ಬಳಸುವುದಾಗಿ ಹೇಳಿದ್ದ ಪ್ರಥಮ್ ನುಡಿದಂತೆ ನಡೆಯುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.