60-70ರ ದಶಕದಿಂದಲೂ ಪರಭಾಷೆಯ ನಣಿಮಣಿಯರು ಕನ್ನಡ ಚಿತ್ರರಂಗಕ್ಕೆ ಬರುವ ಒಂದು ಸಂಸ್ಕೃತಿ ನಡೆದು ಬಂದಿದೆ. ಆ ಕಾಲದ ಜಯಪ್ರದ, ಅಂಬಿಕಾ, ಮಾಧವಿ, ಸರಿತಾ, ಖುಷ್ಬೂ, ಮೀನಾ, ರೋಜಾ, ಸೇರಿದಂತೆ ಸಾಕಷ್ಟು ನಾಯಕಿಯರು ಪರಭಾಷೆಯದವರೇ ಆದ್ರೂ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಕನ್ನಡ ಗೊತ್ತಿಲ್ಲದೆ, ಕನ್ನಡ ಚಿತ್ರರಂಗದಲ್ಲೇ ಜೀವನ ಕಟ್ಟಿಕೊಂಡು ಬೆಂಗಳೂರಿನಲ್ಲೇ ನೆಲೆಸಿರುವ ನಾಯಕಿಯರು ಕೂಡಾ ಇದ್ದಾರೆ.
ಸುಮಲತಾ ಅಂಬರೀಶ್

ಡಾ. ರಾಜ್ಕುಮಾರ್ ಜೊತೆ 'ರವಿಚಂದ್ರ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಮಲತಾಗೆ ಆಗ ಸ್ವಲ್ಪವೂ ಕನ್ನಡ ಬರುತ್ತಿರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಮಲತಾ ಅವರು ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕೈ ಹಿಡಿದು ಕರ್ನಾಟಕದ ಸೊಸೆ ಆದರು. ಆಂಧ್ರದಲ್ಲಿ ಹುಟ್ಟಿ ಬೆಳೆದ ತೆಲುಗು ಅಮ್ಮಾಯಿ ಸುಮಲತಾ ಇದೀಗ ಕನ್ನಡತಿ ಆಗಿದ್ದಾರೆ.
ಮಾಲಾಶ್ರೀ

ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಕ್ವೀನ್, ಕನಸಿನ ರಾಣಿ ಆಗಿ ಮೆರೆದ ನಟಿ ಮಾಲಾಶ್ರೀ. 1989ರಲ್ಲಿ ಸಾರ್ವಕಾಲಿಕ ದಾಖಲೆ ಬರೆದ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಈ ಸಿನಿಮಾ ಮಾಡುವಾಗ ತಮಿಳುನಾಡಿನ ಈ ಹುಡುಗಿಗೆ ಸ್ವಲ್ಪವೂ ಕನ್ನಡ ಬರುತ್ತಿರಲಿಲ್ಲ. ಆ ಚಿತ್ರದಲ್ಲಿ ನಟಿಸಿದ್ದೇ ತಡ ಇವರಿಗೆ ಒಂದಾದ ಮೇಲೊಂದರಂತೆ ಅವಕಾಶ ದೊರೆಯಿತು. ಇದೀಗ ಮಾಲಾಶ್ರಿ ಕನ್ನಡ ನಿರ್ಮಾಪಕ ರಾಮು ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ರಾಗಿಣಿ ದ್ವಿವೇದಿ

ಕನ್ನಡ ಚಿತ್ರರಂಗದಲ್ಲಿ ತುಪ್ಪದ ಹುಡುಗಿ ಎಂದೇ ಕರೆಸಿಕೊಂಡಿರುವ ರಾಗಿಣಿ 2008 ರಲ್ಲಿ ಮಿಸ್ ಇಂಡಿಯಾ ಕಂಟೆಸ್ಟ್ನಲ್ಲಿ ರನ್ನರ್ ಅಪ್ ಆಗಿ ಗೆಲುಗು ಸಾಧಿಸಿದ್ದರು. 2009 ರಲ್ಲಿ 'ವೀರ ಮದಕರಿ' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದ್ರು. ಮೂಲತಃ ಪಂಜಾಬಿ ಆಗಿರುವ ರಾಗಿಣಿ ದ್ವಿವೇದಿಗೆ ಅಂದು ಕನ್ನಡ ಗೊತ್ತಿರಲಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿ, ಸ್ಟಾರ್ ನಟಿಯಾಗಿ ಮಿಂಚಿರುವ ರಾಗಿಣಿ ದ್ವಿವೇದಿ, ಈಗ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವುದು ಕನ್ನಡ ಅಭಿಮಾನಿಗಳಿಗೆ ಖುಷಿ ತಂದಿದೆ.
ಪ್ರಿಯಾಂಕ ತ್ರಿವೇದಿ

ನಟ, ನಿರ್ದೇಶಕ ಉಪೇಂದ್ರ ಅವರನ್ನು ಪ್ರೀತಿಸಿ ಮದುವೆಯಾದ ಪ್ರಿಯಾಂಕ ಮೂಲತ: ಪಶ್ಚಿಮ ಬಂಗಾಳದವರು. ಈ ಬಂಗಾಳಿ ಚೆಲುವೆ 1996 ರಲ್ಲಿ ಮಿಸ್ ಕೊಲ್ಕತ್ತಾ ಆದರು. ನಂತರ ಹೀರೋಯಿನ್ ಆಗಿ, ಬೆಂಗಾಳಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯಾದ್ರು. 'ಹೆಚ್ಟುಒ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕ ಉಪೇಂದ್ರ ಅವರಿಗೆ ಆಗ ಕನ್ನಡ ಬರುತ್ತಿರಲಿಲ್ಲ. ಆದರೆ ಇದೀಗ ಉಪೇಂದ್ರ ಅವರನ್ನು ಕೈ ಹಿಡಿದು ಬೆಂಗಳೂರಿನಲ್ಲಿ ನೆಲೆಸಿ ಕರ್ನಾಟಕದ ಸೊಸೆ ಆಗಿದ್ದಾರೆ.
ಐಂದ್ರಿತಾ ರೇ

ಪಶ್ಚಿಮ ಬಂಗಾಳಕ್ಕೆ ಸೇರಿದ ಐಂದ್ರಿತಾ ರೇ, ಮೆರವಣಿಗೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. ಇದಾದ ನಂತರ ಜಂಗ್ಲಿ, ಮನಸಾರೆ, ಪರಮಾತ್ಮ, ವೀರಪರಂಪರೆ, ವಾಯುಪುತ್ರ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಐಂದ್ರಿತಾ ಇದೀಗ ದೂದ್ ಪೇಡಾ ದಿಂಗತ್ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಬಂಗಾಳಿ ಸುಂದರಿ ಐಂದ್ರಿತಾ ಈಗ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ.
ಪೂಜಾಗಾಂಧಿ

'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದವರು. ಕನ್ನಡ ಭಾಷೆಗಳೊಂದಿಗೆ ಇತರ ಭಾಷೆಗಳಲ್ಲಿ ನಟಿಸಿರುವ ಪೂಜಾಗಾಂಧಿ ಈಗ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. 'ದಂಡುಪಾಳ್ಯ' ಚಿತ್ರದಲ್ಲಿ ಬಹಳ ವಿಭಿನ್ನ ಪಾತ್ರ ಮಾಡಿ ಎಲ್ಲರನ್ನೂ ಸೆಳೆದಿದ್ದ ಪೂಜಾಗಾಂಧಿ ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ.
ಭಾವನಾ ಮೆನನ್

ಕೇರಳ ಕುಟ್ಟಿ ಭಾವನಾ ಮೆನನ್ 16ನೇ ವಯಸ್ಸಿಗೆ 'ನಮ್ಮಾಳ್' ಎಂಬ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದ್ದರು. 2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ 'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ವಿಷ್ಣುವರ್ಧನ, ರೋಮಿಯೋ, ಬಚ್ಚನ್, ಟಗರು ಹೀಗೆ ಕನ್ನಡದ ಹಲವು ಸಿನಿಮಾಗಳಲ್ಲಿ ಭಾವನ ಮೆನನ್ ಮಿಂಚಿದ್ದಾರೆ. ಸುಮಾರು 7 ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ಕನ್ನಡ ನಿರ್ಮಾಪಕ ನವೀನ್ ಅವರನ್ನು ಮದುವೆಯಾಗಿ ಭಾವನಾ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಒಟ್ಟಿನಲ್ಲಿ ಭಾಷೆ ಗೊತ್ತಿಲ್ಲದೆ ನಮ್ಮ ರಾಜ್ಯಕ್ಕೆ ಬಂದು ಕನ್ನಡ ಕಲಿತು ಇಲ್ಲಿ ಬದುಕುಕೊಂಡಿರುವ ಇವರನ್ನು ಕಂಡರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.