ಇಂದು ಕರುನಾಡ ದೀಪ ಅಣ್ಣಾವ್ರ 91ನೇ ಹುಟ್ಟು ಹಬ್ಬದ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರ್ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಣ್ಣ, ರಾಘಣ್ಣ, ಹಾಗೂ ಲಕ್ಷ್ಮೀ ಕುಟುಂಬ ಸಮೇತ ಬಂದು ಅಪ್ಪನ ಸ್ಮಾರಕಕ್ಕೆ ಪೂಜೆ ಮಾಡಿದ್ರು. ಈ ವೇಳೆ ಮಾತನಾಡಿದ ಶಿವಣ್ಣ, ಮೂವರು ದಿಗ್ಗಜರ ಸ್ಮಾರಕಗಳ ಕುರಿತು ತಮ್ಮ ಮನದ ಬಯಕೆ ಹೊರಹಾಕಿದ್ರು.
ಈ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಸಾಹಿತಿ ಬರಗೂರು ರಾಮಚಂದ್ರಪ್ಪ, ಬಂಧು ಮಿತ್ರರು, ಸ್ನೇಹಿತರು ಹಾಗೂ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಪ್ರತಿವರ್ಷದಂತೆ ಈ ವರ್ಷ ಸಹ ಅಭಿಮಾನಿಗಳಿಂದ ಅನ್ನದಾನ , ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮತ್ತೊಂದೆಡೆ ರೆಬಲ್ ಸ್ಟಾರ್ ಅಂಬರೀಶ್ ಅಗಲಿ ಇಂದಿಗೆ ಐದು ತಿಂಗಳಾಯ್ತು. ಈ ಹಿನ್ನೆಲೆ ಸುಮಲತಾ, ಪತಿ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ರು.
ಈ ಸಂಧರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್ ಮೂರು ಜನ ದಿಗ್ಗಜರ ಸ್ಮಾರಕಗಳು ಒಂದೇ ಕಡೆಯಾದ್ರೇ ಮೂವರೂ ಅಭಿಮಾನಿಗೆ ಖುಷಿ ನೀಡುತ್ತೆ ಅಂತಾ ಹೇಳಿದ್ರು.