ವಿಶ್ವಾದ್ಯಂತ ಕೊರೊನಾ ಎಂಬ ಮಾರಕ ವೈರಸ್ ಕೇಕೆ ಹಾಕುತ್ತಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರಗಳು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಜನರು ಗುಂಪು ಗುಂಪಾಗಿ ಸೇರುವುದು ಮಾತ್ರ ತಪ್ಪುತ್ತಿಲ್ಲ. ಇದೀಗ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಎಲ್ಲಾ ಭಾರತೀಯರು ಹಾಗೂ ರಾಜ್ಯದ ಜನತೆಗೆ ಕೈ ಮುಗಿದು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲೇ ಇರಿ ಎಂದು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
![actor darshan on corona virus awareness](https://etvbharatimages.akamaized.net/etvbharat/prod-images/6524640_dd.jpg)
ಈ ಮಾರಕವಾದ ಕೊರೊನಾ ವೈರಸ್ನಿಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಕುಟುಂಬಕ್ಕಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ. ಇಟಲಿ, ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೇ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ಈ ಸೋಂಕು, ಈ ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ. ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ.