ಕಣಿವೆ ರಾಜ್ಯ ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ನೇ ವಿಧಿಗೆ ಇತಿಶ್ರೀ ಹಾಡಿರುವ ಪ್ರಧಾನಿ ಮೋದಿಗೆ ಬಾಲಿವುಡ್ ಬೆಂಕಿ ಚೆಂಡು ಕಂಗನಾ ರಣಾವತ್ ಹ್ಯಾಟ್ಸಾಪ್ ಹೇಳಿದ್ದಾರೆ.
ಗೃಹ ಮಂತ್ರಿ ಅಮಿತ್ ಶಾ, ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಇಂದು ರಾಜ್ಯಸಭೆಯಲ್ಲಿ ಅರ್ಟಿಕಲ್ 370 ರದ್ದುಗೊಳಿ ವಿಧೇಯಕ ಮಂಡಿಸಿದರು. ಈ ಮೂಲಕ ಜಮ್ಮು- ಕಾಶ್ಮೀರಕ್ಕೆ ವಿಶೇಷ ಆದ್ಯತೆ ಕಲ್ಪಿಸಿದ್ದ 370 ನೇ ವಿಧಿ ಇತಿಹಾಸದ ಪುಟ ಸೇರುವಂತೆ ಮಾಡಿದ್ದಾರೆ. ಮೋದಿ ಸರ್ಕಾರದ ಈ ದಿಟ್ಟ ನಡೆಯನ್ನು ಬಾಲಿವುಡ್ನ ಮಣಿ ಕರ್ಣಿಕಾ ಕಂಗನಾ ಮುಕ್ತವಾಗಿ ಸ್ವಾಗತಿಸಿದ್ದಾರೆ. ಇಂತಹ ಧೈರ್ಯ ಕೇವಲ ಮೋದಿ ಅವರಿಗೆ ಮಾತ್ರ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣಕ್ಕೆ ಇದೊಂದು ಐತಿಹಾಸಿಕ ಹೆಜ್ಜೆ. ಕಳೆದ ಕೆಲ ವರ್ಷಗಳಿಂದ ಈ ವಿಧಿ ಕಿತ್ತೊಗೆಯುವಂತೆ ನಾನು ಒತ್ತಾಯಿಸುತ್ತ ಬಂದಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂತು. ಇಂತಹ ಒಂದು ದಿಟ್ಟ - ದೃಢ ನಿರ್ಧಾರ ಕೈಗೊಳ್ಳುವುದು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ನಂಗೆ ಗೊತ್ತಿತ್ತು. ಈ ಐತಿಹಾಸಿಕ ದಿನ ಸೃಷ್ಟಿಸಿದ ಮೋದಿ ಅವರಿಗೆ ಇಡೀ ದೇಶದ ಪರ ಧನ್ಯವಾದಗಳು. ಮುಂದಿನ ಉಜ್ವಲ ಭಾರತವನ್ನು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.