ಮುಂಬೈ (ಮಹಾರಾಷ್ಟ್ರ): ರಸ್ತೆ ಅಗಲೀಕರಣ ಪ್ರಕ್ರಿಯೆಯ ಭಾಗವಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಮಿತಾಭ್ ಬಚ್ಚನ್ ಅವರ ಪ್ರತೀಕ್ಷಾ ಬಂಗಲೆಯ ಒಂದು ಭಾಗವನ್ನು ನೆಲಸಮ ಮಾಡಲು ಮುಂದಾಗಿದೆ. ನಗರದ ಜುಹು ಪ್ರದೇಶದಲ್ಲಿ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ಬಿಎಂಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ.
2017 ರಲ್ಲಿ ಬಿಎಂಸಿ ಅಮಿತಾಭ್ ಬಚ್ಚನ್ ಅವರಿಗೆ ನೋಟಿಸ್ ನೀಡಿತ್ತು. 2017 ರಿಂದಲೂ ಬಿಎಂಸಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಮತ್ತು ಮುಂಬೈ ಉಪನಗರಗಳ ಜಿಲ್ಲಾಧಿಕಾರಿಗೆ ಪತ್ರವನ್ನೂ ಕಳುಹಿಸಲಾಗಿದೆ. ಇದರ ನಂತರ ಫೆಬ್ರವರಿ 2021 ರಲ್ಲಿ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ರಸ್ತೆ ವಿಸ್ತರಣೆಗೆ ಸಂಬಂಧಿಸಿದ ಕೆಲಸವನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಸ್ವೀಕರಿಸಿದ ಕೂಡಲೇ ಕೈಗೆತ್ತಿಕೊಳ್ಳಲು ನಿರ್ಧರಿಸಲಾಯಿತು. ಆ ವೇಳೆ ರಸ್ತೆ ಅಗಲೀಕರಣದಲ್ಲಿ ತನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ವತಃ ಅಮಿತಾಭ್ ಬಚ್ಚನ್ ಅವರೇ ಬಿಎಂಸಿಗೆ ತಿಳಿಸಿದ್ದರು.
ಪ್ರತೀಕ್ಷ'ದಿಂದ ಇಸ್ಕಾನ್ ದೇವಸ್ಥಾನದತ್ತ ಸಾಗುವ ಮಾರ್ಗದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಚಂದನ್ ಸಿನಿಮಾ ಪ್ರದೇಶವನ್ನು ಲಿಂಕ್ ರಸ್ತೆಗೆ ಸಂಪರ್ಕಿಸುವ ಸಂತ ಜ್ಞಾನೇಶ್ವರ ಮಾರ್ಗವನ್ನು ವಿಸ್ತರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಸ್ತರಣೆಗಾಗಿ ಪ್ರತೀಕ್ಷದ ಗೋಡೆ ಉರುಳಿಸುವ ಕೆಲಸ ಮಾತ್ರ ಬಾಕಿಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದರೆ, ರಸ್ತೆ ಅಗಲೀಕರಣಕ್ಕಾಗಿ ಬಿಎಂಸಿ ಪ್ರತೀಕ್ಷ ಕಟ್ಟಡದ ಪಕ್ಕದ ಕಟ್ಟಡವನ್ನು ನೆಲಸಮ ಮಾಡಿದೆ. ಆದರೆ, ಬಚ್ಚನ್ ಅವರ ನಿವಾಸಕ್ಕೆ ಯಾವುದೇ ಹಾನಿ ಮಾಡಿಲ್ಲ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.