ಪ್ರಾಗ್( ಜೆಕ್ ರಿಪಬ್ಲಿಕ್): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೆಕ್ ರಿಪಬ್ಲಿಕ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಹೈಡ್ರೋಜನ್ ಬಸ್ನಲ್ಲಿ ಟೆಸ್ಟ್ ಡ್ರೈವ್ ಮಾಡಿದರು. ಈ ಮೂಲಕ ಹೈಡ್ರೋಜನ್ ಬಸ್ಗಳ ಬಳಕೆ ಮಾಡಿಕೊಳ್ಳುವ ಕುರಿತಂತೆ ಅವರು ಮಾಹಿತಿ ಪಡೆದುಕೊಂಡರು.
![Union Minister Nitin Gadkari took a test drive in a Hydrogen Bus by Skoda in Prague](https://etvbharatimages.akamaized.net/etvbharat/prod-images/03-10-2023/f7cqulxbuaa_kus_0310newsroom_1696294770_1062.jpg)
ನಿತಿನ್ ಗಡ್ಕರಿ ಕಚೇರಿ ಎಕ್ಸ್ ಖಾತೆಯಲ್ಲಿ( ಟ್ವಿಟರ್) ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ಕೇಂದ್ರ ಸಚಿವ ಶ್ರೀ @nitin_gadkari ಜಿ ಅವರು ಇಂದು ಜೆಕ್ ರಿಪಬ್ಲಿಕ್ನ ಪ್ರಾಗ್ನಲ್ಲಿ ಸ್ಕೋಡಾದಿಂದ ಹೈಡ್ರೋಜನ್ ಬಸ್ ಟೆಸ್ಟ್ ಡ್ರೈವ್ ಮಾಡಿದರು, ಪರಿಸರ ಸ್ನೇಹಿ ಹಾಗೂ ಕಾರ್ಬನ್ ಡೈಯಾಕ್ಸೈಡ್ ಮುಕ್ತ ಬಸ್ ಬಳಕೆ ಸಂಬಂಧಿಸಿದಂತೆ ಅವರು ಹೈಡ್ರೋಜನ್ ಬಸ್ಗಳ ಬಳಕೆ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಹೇಳಲಾಗಿದೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮತ್ತೊಂದು ಪೋಸ್ಟ್ ಮಾಡಿರುವ ನಿತಿನ್ ಗಡ್ಕರಿ ಅವರ ಕಚೇರಿ, "ಹೈಡ್ರೋಜನ್ ಬಸ್ಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಪರಿಸರವನ್ನು ಉಳಿಸುವ ಮಹತ್ವದ ಭರವಸೆಯನ್ನು ಮೂಡಿಸಿವೆ. ಈ ಬಸ್ಗಳು ಸ್ವಚ್ಛ ಮತ್ತು ಹಸಿರೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತವೆ" ಎಂದು ಬಣ್ಣಿಸಲಾಗಿದೆ.
![Union Minister Nitin Gadkari took a test drive in a Hydrogen Bus by Skoda in Prague](https://etvbharatimages.akamaized.net/etvbharat/prod-images/03-10-2023/f7cqtblbaaafszt_0310newsroom_1696294770_981.jpg)
ಈ ವರ್ಷದ ಜನವರಿಯಲ್ಲಿ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಎಂಬ ಧ್ಯೇಯ ವಾಖ್ಯೆಯೊಂದಿಗೆ ಈ ಯೋಜನೆಯನ್ನ ಅನುಮೋದಿಸಿತ್ತು. ಈ ಯೋಜನೆಯ ಭಾಗವಾಗಿ ಅಂತಹ ತಂತ್ರಜ್ಞಾನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿ ಮಾಡುವ ವಲಯವನ್ನಾಗಿ ಭಾರತವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಹಸಿರು ಹೈಡ್ರೋಜನ್ ಮಿಷನ್ ಕ್ರಮೇಣ ಕೈಗಾರಿಕೆ, ಸಾರಿಗೆ ಮತ್ತು ಇಂಧನ ಕ್ಷೇತ್ರಗಳ ಡಿಕಾರ್ಬೊನೈಸೇಶನ್ಗೆ ಕಾರಣವಾಗುತ್ತದೆ ಮತ್ತು ಆಮದು ಮಾಡಿಕೊಂಡ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ .
ನಿತಿನ್ ಗಡ್ಕರಿ ಭಾನುವಾರ ಪ್ರಾಗ್ಗೆ ಭೇಟಿ ನೀಡಿದ್ದು, ಇಲ್ಲಿ ನಡೆದ 27 ನೇ ವಿಶ್ವ ರಸ್ತೆ ಕಾಂಗ್ರೆಸ್ನಲ್ಲಿ ಭಾಗವಹಿಸಿದರು. ಭಾರತವು ಪ್ರಸ್ತುತ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲ ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ ಎಂದೂ ಹೇಳಿದ್ದಾರೆ.
ಪ್ರಾಗ್ನಲ್ಲಿ ನಡೆದ 27ನೇ ವಿಶ್ವ ರಸ್ತೆ ಕಾಂಗ್ರೆಸ್ನಲ್ಲಿ ಮಾತನಾಡಿದ ಗಡ್ಕರಿ, ಅಪಘಾತಗಳು ಭಾರತದಂತ ರಾಷ್ಟ್ರದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ರಸ್ತೆ ಕಾಂಗ್ರೆಸ್ನಲ್ಲಿ ವಿವರವಾಗಿ ಮಾತನಾಡಿದ್ದಾರೆ. ’’ನಾವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದ್ದೇವೆ, ಅಷ್ಟೇ ಅಲ್ಲ ನಾವು ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಿಯೂ ಹೊರ ಹೊಮ್ಮಿದ್ದೇವೆ. ಇವು ದೇಶದ ಎರಡು ಶಕ್ತಿಗಳಾಗಿವೆ. ಆದರೆ ಅದೇ ಸಮಯದಲ್ಲಿ, ದೇಶದಲ್ಲಿ ಹೆಚ್ಚು ಹೆಚ್ಚು ಅಪಘಾತದಂತಹ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಇದು ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
"ಇದಲ್ಲದೇ, ಭಾರತ್ ಎನ್ಸಿಎಪಿಯಂತಹ ಪ್ರಮುಖ ಕಾರ್ಯಕ್ರಮಗಳೊಂದಿಗೆ ಆಟೋಮೊಬೈಲ್ ಕ್ಷೇತ್ರದ ಸುರಕ್ಷತೆಯ ಬಗ್ಗೆ ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ರಸ್ತೆ ಕಾಂಗ್ರೆಸ್ನಲ್ಲಿ ವಿವರಿಸಿದರು. ಸ್ಟಾಕ್ಹೋಮ್ ಘೋಷಣೆಯಲ್ಲಿ ನಿಗದಿಪಡಿಸಿದ ಜಾಗತಿಕ ರಸ್ತೆ ಸುರಕ್ಷತೆ ಗುರಿಗಳನ್ನು ಸಾಧಿಸಲು ಭಾರತ ಬದ್ಧವಾಗಿದೆ ಎಂದೂ ಇದೇ ವೇಳೆ ಗಡ್ಕರಿ ಘೋಷಿಸಿದ್ದಾರೆ.
27 ನೇ ವಿಶ್ವ ರಸ್ತೆ ಕಾಂಗ್ರೆಸ್ ಅಧಿವೇಶನದಲ್ಲಿ ಗಡ್ಕರಿ ಅವರು ಮಲೇಷ್ಯಾದ ಕಾಮಗಾರಿಗಳ ಸಚಿವ ಅಲೆಕ್ಸಾಂಡರ್ ನಂಟ ಲಿಂಗಿ ಅವರೊಂದಿಗೆ ಸಂವಾದ ನಡೆಸಿದರು. ಜೆಕ್ ಗಣರಾಜ್ಯದ ಸಾರಿಗೆ ಸಚಿವ ಮಾರ್ಟಿನ್ ಕುಪ್ಕಾ ಅವರು ವಿಶ್ವ ರಸ್ತೆ ಕಾಂಗ್ರೆಸ್ನಲ್ಲಿ ಗಡ್ಕರಿ ಅವರನ್ನು ಸ್ವಾಗತಿಸಿದರು. (ಎಎನ್ಐ)
ಇದನ್ನು ಓದಿ: ಕೊನೆಗೂ ಸುರಂಗ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ: ಸುರಕ್ಷತೆಗೆ ಪ್ರಾಧಿಕಾರವೇ ಹೊಣೆ ಎಂದ ಜಿಲ್ಲಾಡಳಿತ!