ರಾವಲ್ಪಿಂಡಿ (ಪಾಕಿಸ್ತಾನ) : ಪಾಕಿಸ್ತಾನದ ಪ್ರಮುಖ ಸೇನಾ ಶಸ್ತ್ರಾಗಾರ ನಗರವಾದ ರಾವಲ್ಪಿಂಡಿಯಲ್ಲಿ ದರೋಡೆಕೋರರು ಮತ್ತು ಕಳ್ಳರ ಅಟ್ಟಹಾಸ ಮೇರೆ ಮೀರಿದೆ. ಇತ್ತೀಚಿನ ದಿನಗಳಲ್ಲಿ 89 ಕಳ್ಳತನ ಮತ್ತು ದರೋಡೆ ಪ್ರಕರಣಗಳು ನಡೆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇದರಲ್ಲಿ 29 ಜನರು ತಮ್ಮ ದ್ವಿಚಕ್ರವಾಹನಗಳು, 42 ಮೊಬೈಲ್ ಫೋನ್ಗಳು ಮತ್ತು 3.5 ಮಿಲಿಯನ್ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ಎಲ್ಲಾ ಪ್ರಕರಣಗಳನ್ನು ಪೋಲೀಸರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಮಧ್ಯೆ ನಗರದಲ್ಲಿ ಬೀದಿ ಅಪರಾಧ ಪ್ರಕರಣಗಳು (street crime) ಅವ್ಯಾಹತವಾಗಿ ಮುಂದುವರೆದಿವೆ.
ಇತ್ತೀಚೆಗೆ ರಾವಲ್ಪಿಂಡಿಯಲ್ಲಿ ಘಟಿಸಿದ ಪ್ರಮುಖ ದರೋಡೆ ಪ್ರಕರಣಗಳನ್ನು ನೋಡುವುದಾದರೆ, ಮುಬೀನ್ ಸಾಜಿದ್ ಎಂಬುವರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋದಾಗ ಅಪರಿಚಿತ ಕಳ್ಳರು ತಮ್ಮ ಮನೆಗೆ ನುಗ್ಗಿ 12,25,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ರಾವತ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಮದ್ ನಸೀಬ್ ಸದ್ದರ್ ಬೈರೂನಿ ಪೊಲೀಸರಿಗೆ ಇದೇ ರೀತಿಯ ದೂರು ದಾಖಲಿಸಿದ್ದಾರೆ. ಅವರು 21,00,000 ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಕೆಲ ಕಳ್ಳರು ತಮ್ಮ ಮನೆಗೆ ನುಗ್ಗಿ 14,84,000 ರೂಪಾಯಿ ಮೌಲ್ಯದ ಚಿನ್ನಾಭರಣ, ಬಾಂಡ್ಗಳು ಮತ್ತು ನಗದನ್ನು ಕದ್ದೊಯ್ದಿದ್ದಾರೆ ಎಂದು ಗುಜರ್ ಖಾನ್ ನಿವಾಸಿ ಮೊಹಮ್ಮದ್ ಜಾಫರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ಸಿದ್ದಿಕ್ ಎಂಬುವರು ತಮ್ಮ ನಗದು, ಚಿನ್ನಾಭರಣ ಮತ್ತು 1 ಲಕ್ಷ 92 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಸಿದುಕೊಳ್ಳಲಾಗಿದೆ ಎಂದು ದೂರು ನೀಡಿದ್ದಾರೆ. ಇದೇ ರೀತಿಯ ಕಳ್ಳತನದ ಘಟನೆಗಳು ರೇಸ್ ಕೋರ್ಸ್ನಲ್ಲಿ ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರ ಮನೆಯಿಂದ 7,25,000 ಮೌಲ್ಯದ ಚಿನ್ನಾಭರಣ ಮತ್ತು 2 ಲಕ್ಷ ನಗದು ಮತ್ತು ಮೊಬೈಲ್ ಫೋನ್ ದೋಚಲಾಗಿದೆ.
ರಾಜಧಾನಿ ಇಸ್ಲಾಮಾಬಾದ್ ಕೂಡ ಸುರಕ್ಷಿತವಾಗಿಲ್ಲ. ರಾಜಧಾನಿಯಲ್ಲಿ ನಡೆದ ಪ್ರತ್ಯೇಕ ದರೋಡೆ ಪ್ರಕರಣಗಳ ಸಂದರ್ಭದಲ್ಲಿ ದುಷ್ಕರ್ಮಿಗಳು ಇಬ್ಬರನ್ನು ಗುಂಡಿಕ್ಕಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೊದಲ ಘಟನೆಯಲ್ಲಿ, ಸಂಜಾನಿ ಟೋಲ್ ಪ್ಲಾಜಾದಲ್ಲಿ ನಡೆದ ದರೋಡೆಯ ಸಂದರ್ಭದಲ್ಲಿ ದರೋಡೆಕೋರರ ತಂಡವು ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ ಗಾಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ರಿಸಾಲ್ಪುರದ ನಿವಾಸಿ ಮೊಹಮ್ಮದ್ ಸದಾಂ ಎಂದು ಗುರುತಿಸಲಾಗಿದೆ.
ಇಸ್ಲಾಮಾಬಾದ್ನಲ್ಲಿ ಬೀದಿ ಅಪರಾಧಗಳ ಪ್ರಮಾಣ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಅಬ್ದುಲ್ ರೆಹಮಾನ್ ಕಂಜು ಸೋಮವಾರ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನಿ ಪತ್ರಿಕೆಯೊಂದರ ಪ್ರಕಾರ, ಜನಸಂಖ್ಯಾ ಹೆಚ್ಚಳದಿಂದ ಬೀದಿ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕಂಜು ಹೇಳಿದ್ದಾರೆ. ಅಪರಾಧ ನಿಯಂತ್ರಣಕ್ಕೆ ಪಾಕಿಸ್ತಾನ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದ ಆಂತರಿಕ ಸಚಿವರು, ದ್ವಿಚಕ್ರವಾಹನಗಳಲ್ಲಿ ಬೀದಿಗಳಲ್ಲಿ ಗಸ್ತು ತಿರುಗಲು ಈಗಲ್ ಸ್ಕ್ವಾಡ್ ಅನ್ನು ರಚಿಸಲಾಗಿದೆ. ಸ್ಕ್ವಾಡ್ ರಚನೆಯಾದ ನಂತರ ಅಪರಾಧದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಜನಸಂಖ್ಯೆ ಕುಸಿತದಿಂದ ಕಂಗಾಲಾದ ಜಪಾನ್: ಜನನ ದರ ಹೆಚ್ಚಳಕ್ಕೆ ಪ್ಲಾನ್!