ಜರ್ಮನಿ: ವಿವಿಧ ದೇಶಗಳಿಗೆ ಸಾಲ ನೀಡಿ ಅವುಗಳ ಮೇಲೆ ಸವಾರಿ ಮಾಡುವ ಚೀನಾಗೆ ಸೆಡ್ಡು ಹೊಡೆಯಲು ಭಾರತ, ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ ಜಿ 7 ರಾಷ್ಟ್ರಗಳು 'ಗೇಮ್ ಚೇಂಜಿಂಗ್ ಯೋಜನೆ'ಯನ್ನು ಅನಾವರಣಗೊಳಿಸಿವೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾದ 'ಜಾಗತಿಕ ಮೂಲಸೌಕರ್ಯಕ್ಕಾಗಿ ಪಾಲುದಾರಿಕೆ(ಪಿಜಿಐಐ) ಯೋಜನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಿ7 ನಾಯಕರು ಔಪಚಾರಿಕವಾಗಿ ಹಸಿರು ನಿಶಾನೆ ತೋರಿಸಿದರು.
2027 ರ ವೇಳೆಗೆ ಅಂದರೆ 5 ವರ್ಷಗಳಲ್ಲಿ ಜಿ 7 ಮತ್ತು ಆಹ್ವಾನಿತ ರಾಷ್ಟ್ರಗಳು ಸೇರಿದಂತೆ 600 ಬಿಲಿಯನ್ ಡಾಲರ್ ಹಣವನ್ನು ಹೊಂದಿಸಿ, ಅದನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಗತ್ಯವಿರುವ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆ ಮಾಡಲು 'ಜಾಗತಿಕ ಮೂಲಸೌಕರ್ಯಕ್ಕಾಗಿ ಪಾಲುದಾರಿಕೆ'(ಪಿಜಿಐಐ) ಯೋಜನೆಗೆ ಜಿ 7 ನಾಯಕರು ವಾಗ್ದಾನ ಮಾಡಿದರು.
ಬಳಿಕ ಮಾತನಾಡಿದ ಜೋ ಬೈಡನ್, ಈ ಯೋಜನೆಯು ಎಲ್ಲ ರಾಷ್ಟ್ರಗಳ ಆದಾಯವನ್ನು ಹೆಚ್ಚಿಸುತ್ತದೆ. 2027 ರ ವೇಳೆಗೆ ಜಿ7 ನಿಂದ ಸುಮಾರು 600 ಬಿಲಿಯನ್ ಡಾಲರ್ ಹಣವನ್ನು ಸಜ್ಜುಗೊಳಿಸುವ ಗುರಿ ಹೊಂದಿದ್ದೇವೆ. ಇದು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಜನರ ಜೀವನವನ್ನು ಸುಧಾರಿಸುತ್ತದೆ ಎಂದರು.
![ಜರ್ಮನಿಯಲ್ಲಿ ಜಿ 7 ರಾಷ್ಟ್ರಗಳ ನಾಯಕರ ಸಭೆ](https://etvbharatimages.akamaized.net/etvbharat/prod-images/15673290_bng.jpg)
ಚೀನಾದ ಬೆಲ್ಟ್ ಅಂಡ್ ರೋಡ್ಗೆ ಪರ್ಯಾಯ: ಡ್ರ್ಯಾಗನ್ ರಾಷ್ಟ್ರ ಚೀನಾ ಬೆಲ್ಟ್ ಅಂಡ್ ರೋಡ್(ಬಿಆರ್ಐ) ಯೋಜನೆಯಡಿ ವಿವಿಧ ರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇದನ್ನು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು 2013 ರಲ್ಲಿ ಜಾರಿಗೆ ತಂದರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಂದರು, ರಸ್ತೆ ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಈ ಯೋಜನೆಯಡಿ ಹಣಕಾಸು ಒದಗಿಸುತ್ತದೆ.
ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಚೀನಾದ ಈ ಯೋಜನೆಯ ಮೇಲೆ ಟೀಕೆಯೂ ಇದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಲದ ಮಾದರಿಯಲ್ಲಿ ಹಣದ ನೆರವು ನೀಡಿ, ಆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಸವಾರಿ ಮಾಡುತ್ತದೆ. ಸಾಲ ಮರುಪಾವತಿ ಮಾಡುವಲ್ಲಿ ಸೋಲುವ ದೇಶಗಳ ಪ್ರಮುಖ ಸ್ವತ್ತುಗಳನ್ನು ಬಿಟ್ಟುಕೊಡುವಂತೆ ಒತ್ತಡ ಹೇರುತ್ತದೆ. ಶ್ರೀಲಂಕಾ, ಥೈವಾನ್ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಚೀನಾ ಇದೇ ರೀತಿಯ ಅಸ್ತ್ರ ಪ್ರಯೋಗಿಸಿದೆ.
ಭಾರತಕ್ಕೇನು ಲಾಭ: ಜಿ 7 ರಾಷ್ಟ್ರಗಳು ಘೋಷಿಸಿರುವ ಪಿಜಿಐಐ ಯೋಜನೆಯಿಂದ ಭಾರತದ ಗ್ರಾಮೀಣ ಭಾಗದ ಯೋಜನೆಗಳು ಕಳೆಕಟ್ಟಲಿವೆ. ಪಿಜಿಐಐ ಯೋಜನೆ ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಸಾಹಸೋದ್ಯಮ ಬಂಡವಾಳ ನಿಧಿಯಾಗಿದೆ.
ನೂರಾರು ಶತಕೋಟಿ ಡಾಲರ್ಗಳನ್ನು ಪಾಲುದಾರಿಕೆಯಡಿ ಹೂಡಿಕೆ ಮಾಡಿ ಗುಣಮಟ್ಟದ, ಸುಸ್ಥಿರ ಮೂಲಸೌಕರ್ಯವನ್ನು ತಲುಪಿಸಿ ಜನರ ಜೀವನದಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತದೆ.
ಶೃಂಗಸಭೆಯಲ್ಲಿ ಮೋದಿ ಮಾತು: ಹವಾಮಾನ ಬದಲಾವಣೆ ಬದ್ಧತೆಗಳಿಗೆ ಭಾರತ ಬದ್ಧವಾಗಿದೆ. ಸಮರ್ಪಣೆ, ಕಾರ್ಯಕ್ಷಮತೆಯಿಂದ ಸಾಧಿಸಲು ರಾಷ್ಟ್ರ ಸಜ್ಜಾಗಿದೆ. ಪ್ರಪಂಚದಲ್ಲಿಯೇ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಭಾರತದಲ್ಲಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಕ್ಷೇತ್ರದಲ್ಲೂ ಇದನ್ನು ರೂಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಹವಾಮಾನ, ಶಕ್ತಿ ಮತ್ತು ಆರೋಗ್ಯ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, 9 ವರ್ಷಗಳಲ್ಲಿ ದೇಶ ಪಳೆಯುಳಿಕೆರಹಿತ ಮೂಲಗಳಿಂದ ಶೇ.40 ರಷ್ಟು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಾಧಿಸಿದೆ. ಹವಾಮಾನ ಬದಲಾವಣೆ ಸಂಕಲ್ಪಕ್ಕೆ ಭಾರತ ಬದ್ಧವಾಗಿದೆ ಎಂದರು.
ಕೋವಿಡ್ ವೇಳೆ ಆರೋಗ್ಯ ಕ್ಷೇತ್ರದಲ್ಲಿ ದೇಶ ಮಹತ್ತರ ಬದಲಾವಣೆ ಕಂಡಿದೆ. ದೇಶದ ಆವಿಷ್ಕಾರಗಳನ್ನು ಇತರೆ ಅಭಿವೃದ್ಧಿ ರಾಷ್ಟ್ರಗಳಿಗೆ ಪರಿಚಯಿಸಲು ಜಿ7 ನೆರವಾಗಬೇಕು ಎಂದರು.
ಇದನ್ನೂ ಓದಿ: ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ; ಜಾಗತಿಕ ನಾಯಕರ ಭೇಟಿ, ಮಾತುಕತೆ