ಇಸ್ಲಾಮಾಬಾದ್: ಪಾಕಿಸ್ತಾನದ ಬಗ್ಗೆ ವಿಭಜನೆಗೂ ಮುನ್ನ ಇದ್ದ ದೃಷ್ಟಿಕೋನವನ್ನೇ ಭಾರತ ಈಗಲೂ ಇಟ್ಟುಕೊಂಡಿರುವುದು ಅದರದೇ ತಪ್ಪು. ಪಾಕ್ ಶಾಂತಿಮಂತ್ರ ಜಪಿಸುವುದನ್ನ ಭಾರತ ಯಾವತ್ತೂ ಬಲಹೀನತೆ ಎಂದುಕೊಳ್ಳಬಾರದು ಎಂದು ರಾಷ್ಟ್ರಾಧ್ಯಕ್ಷ ಅರೀಫ್ ಅಲ್ವಿ ಅವರು ಕುಟುಕಿದ್ದಾರೆ.
ಇಸ್ಲಾಮಾಬಾದ್ನಲ್ಲಿ ನಡೆದ ಪಾಕಿಸ್ತಾನ್ ಡೇ ಆಫ್ ಪರೇಡ್ನಲ್ಲಿ ಮಾತನಾಡಿದ ಅವರು, ಭಾರತದ ಆಕ್ರಮಣಶೀಲತೆ ನಡೆಗೆ ತಕ್ಕ ಉತ್ತರ ನೀಡುವುದು ಪಾಕ್ನ ಜವಾಬ್ದಾರಿಯಾಗಿತ್ತು. ಉತ್ತಮ ಕಾರ್ಯತಂತ್ರದ ಮೂಲಕವೇ ಪ್ರತ್ಯುತ್ತರ ನೀಡಿದ್ದೇವೆ ಎಂದರು.
ಪಾಕ್ ಬಗ್ಗೆ ಭಾರತ ಇಟ್ಟುಕೊಂಡಿರುವ ದೃಷ್ಟಿಕೋನದಿಂದ ಸ್ಥಳೀಯ ಸುಸ್ಥಿರತೆಗೆ ಅಪಾಯ ಎದುರಾಗುತ್ತಿದೆ. ಪಾಕ್ನ ನೈಜತೆಯನ್ನು ಭಾರತ ಒಪ್ಪಿಕೊಳ್ಳಬೇಕು. ಮಾತುಕತೆಯ ಒಂದೇ ಮಾರ್ಗದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದೂ ಹೇಳಿದರು.
ನಾವು ಶಾಂತಿ ಬಯಸುತ್ತೇವೆ. ಹಾಗೆಂದ ಮಾತ್ರಕ್ಕೆ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪಾಕ್ನ ಮಿಲಿಟರಿ ಸಾಮರ್ಥ್ಯವೇನೆಂಬುದು ಇತ್ತೀಚೆಗೆ ತಾನೆ ಎಲ್ಲರಿಗೂ ಗೊತ್ತಾಗಿದೆ ಎಂದು ಪರೋಕ್ಷವಾಗಿ ಕಿಚಾಯಿಸಿದರು.