ಇಸ್ಲಾಮಾಬಾದ್: ಆರ್ಥಿಕ ಹಿನ್ನಡೆ, ಭಾರತದೊಂದಿಗೆ ವಿರಸ ಹಾಗೂ ಜಾಗತಿಕಮಟ್ಟದಲ್ಲಿ ಒಂಟಿಯಾಗಿರುವ ಪಾಕಿಸ್ತಾನದಲ್ಲಿ ಆಂತರಿಕ ಭಿನ್ನಮತ ಅತ್ಯಂತ ದೊಡ್ಡ ಹಂತಕ್ಕೆ ತಲುಪಿದ್ದು ಪ್ರಧಾನಿ ಇಮ್ರಾನ್ ಖಾನ್ ಪದತ್ಯಾಗಕ್ಕೆ ಬಲವಾದ ಕೂಗು ಕೇಳಿಬಂದಿದೆ.
ಜಾಮಿಯತ್ ಉಲೇಮಾ ಇ-ಇಸ್ಲಾಂ(ಜೆಯುಐ-ಎಫ್) ಇಮ್ರಾನ್ ಖಾನ್ ಸರ್ಕಾರದ ನಡೆಯನ್ನು ವಿರೋಧಿಸಿ ಮೌಲಾನ ಫಝ್ಲುರ್ ರೆಹಮಾನ್ ನೇತೃತ್ವದಲ್ಲಿ ಬೃಹತ್ 'ಆಜಾದಿ ಜಾಥಾ' ಈಗಾಗಲೇ ಆರಂಭಿಸಿದ್ದು, ಶುಕ್ರವಾರ ಈ ಜಾಥಾ ಪಾಕಿಸ್ತಾನದ ರಾಜಧಾನಿಯನ್ನು ಪ್ರವೇಶಿಸಿದೆ.
ಭಾನುವಾರದಂದು ಕರಾಚಿಯಿಂದ ಆರಂಭವಾದ ಆಜಾದಿ ಜಾಥಾ, ಬುಧವಾರ ಲಾಹೋರ್ ತಲುಪಿತ್ತು. ಶುಕ್ರವಾರದಂದು ಇಸ್ಲಾಮಾಬಾದ್ ತಲುಪಿದ್ದು, ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್(ಪಿಟಿಐ) ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೃಹತ್ ಜಾಥಾ ಹಿನ್ನೆಲೆಯಲ್ಲಿ ರಾವಲ್ಪಿಂಡಿ ಹಾಗೂ ಇಸ್ಲಾಮಾಬಾದ್ನಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ. ಇದರ ಜೊತೆಯಲ್ಲಿ ಇಸ್ಲಾಮಾಬಾದ್ ಹಾಗೂ ರಾವಲ್ಪಿಂಡಿಯಲ್ಲಿ ಮೆಟ್ರೋ ಬಸ್ ಸೇವೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.