ಬೀಜಿಂಗ್: ಆಗಸ್ಟ್ 25 ರಂದು ಮ್ಯಾನ್ಮಾರ್ ಮೂಲಕ ಹಿಂದೂ ಮಹಾಸಾಗರ ಪ್ರವೇಶಿಸುವ ಹೊಸ ರೈಲು ಮಾರ್ಗವನ್ನು ಚೀನಾ ಗಡಿಯಲ್ಲಿ ಉದ್ಘಾಟಿಸಲಾಗಿದೆ. ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡುವಿನಿಂದ ಚೀನಾದ ಯುನ್ನಾನ್ ಪ್ರಾಂತ್ಯ ಹಾಗೂ ಮ್ಯಾನ್ಮಾರ್ನ ಚಿನ್ ಶ್ವೆ ಹಾವ್ವರೆಗೂ ಈ ರೈಲು ಮಾರ್ಗ ವಿಸ್ತರಿಸಿದೆ.
ಈ ರೈಲು ಮಾರ್ಗವು ಚೀನಾಗೆ ಸಿಂಗಾಪುರ ಬಂದರಿನಿಂದ ಮ್ಯಾನ್ಮಾರ್ ಮೂಲಕ ಸರಕು ಸಾಗಿಸಲು ಅನುವು ಮಾಡಿಕೊಡುತ್ತದೆ. ಸಿಂಗಾಪುರ ಬಂದರಿಂದ ಯಾಂಗೋನ್ ಬಂದರಿಗೆ ಸರಕುಗಳನ್ನು ಸಾಗಿಸಲಾಗುವುದು. ಅಲ್ಲಿಂದ ಅದನ್ನು ಕೊಕಾಂಗ್ ಸ್ವ - ಆಡಳಿತ ವಲಯದ ಚಿನ್ ಶ್ವೇ ಹಾವ್ಗೆ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ನಂತರ ಲಿಂಕಾಂಗ್ನಿಂದ ಚೆಂಗ್ಡುಗೆ ರೈಲಿನ ಮೂಲಕ ಸಾಗಿಸಲಾಗುತ್ತದೆ. ಮ್ಯಾನ್ಮಾರ್ನ ಚೀನೀ ರಾಯಭಾರ ಕಚೇರಿಯ ಪ್ರಕಾರ, ಲಿಂಕಾಂಗ್ನಿಂದ ರೈಲ್ವೆ ಮೂಲಕ ಚೆಂಗ್ಡುಗೆ ಹೋಗಲು ಮೂರು ದಿನಗಳು ಬೇಕಾಗುತ್ತದೆ.
ಈ ಮಾರ್ಗವು ಪಶ್ಚಿಮ ಚೀನಾವನ್ನು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಮೊದಲ ಮಾರ್ಗವಾಗಿದೆ. ಜತೆಗೆ ಯುನಾನ್ ಪ್ರಾಂತ್ಯಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳಲು ಬೇಕಾದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಮಾರ್ಗವು ಮ್ಯಾನ್ಮಾರ್ ಭಾಗದಲ್ಲಿ ಮಂಡಲೇ, ಲಶಿಯೊ ಮತ್ತು ಹ್ಸೆನ್ವಿ ಮೂಲಕ ಹಾದು ಹೋಗುತ್ತದೆ. ಈ ಮಾರ್ಗವು ಮ್ಯಾನ್ಮಾರ್ ನ ಸೇನಾ ಆಡಳಿತಕ್ಕೆ ಆದಾಯ ಒದಗಿಸುತ್ತಿದ್ದು, ಚೀನಾ ಮತ್ತು ಮ್ಯಾನ್ಮಾರ್ ಗೆ ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ತಾಲಿಬಾನ್ಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಮುಂದುವರಿಸುವ ಬಯಕೆ
ಬೀಜಿಂಗ್ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ಐ) ನ ಭಾಗವಾಗಿ ಚಿನ್ ಶ್ವೇ ಹಾವ್ನಲ್ಲಿ ಗಡಿ ಆರ್ಥಿಕ ಸಹಕಾರ ವಲಯ ಸ್ಥಾಪಿಸಲು ಕ್ರಮಗಳು ನಡೆಯುತ್ತಿವೆ. ಈ ಮಾರ್ಗವು ಯುನ್ನಾನ್ ಪ್ರಾಂತ್ಯದ ಆಮದು ಮತ್ತು ರಫ್ತಿಗೆ ಮಧ್ಯಂತರ ಆರ್ಥಿಕ ಕೇಂದ್ರವಾಗಿ ಪರಿಣಮಿಸುತ್ತದೆ.
ಚೀನಾದ ಈ ನಿರ್ಧಾರ ಭಾರತಕ್ಕೆ ಅಪಾಯವೇ ಸರಿ. ಮತ್ತೊಂದು ಮಾರ್ಗ ತೆರೆದಿರುವ ಚೀನಾ ನಿಧಾನವಾಗಿ ಹಿಂದೂಮಹಾಸಾಗರದ ಮೇಲೆ ನಿಯಂತ್ರಣ ಹೊಂದಲು ಮಾಡಿರುವ ಮೆಗಾ ಪ್ಲಾನ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೊದಲೇ ಭಾರತದ ಮೇಲೆ ವಾಣಿಜ್ಯಿಕ ವ್ಯವಹಾರದ ಜತೆ ದ್ವೇಷವನ್ನು ಹೊಂದಿರುವ ಚೀನಾ ಏನಾದರೂ ಪ್ಲಾನ್ ಮಾಡುತ್ತಲೇ ಇರುತ್ತದೆ.