ತಿರುವನಂತಪುರಂ (ಕೇರಳ) : ಕನ್ನಡ ಚಿತ್ರರಂಗದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿನ ಸುದ್ದಿ ಮಾಸುವ ಮುನ್ನವೇ ಮತ್ತೋರ್ವ ನಟಿ ನಿಧನರಾಗಿದ್ದಾರೆ. ಕೇರಳದ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ಅಪರ್ಣಾ ನಾಯರ್ ನಿನ್ನೆ (ಆಗಸ್ಟ್ 31) ಸಂಜೆ 7 ಗಂಟೆ ಸುಮಾರಿಗೆ ರಾಜಧಾನಿ ತಿರುವನಂತಪುರಂನ ಕರಮಾನ ತಾಲಿಯಾಲ್ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮಲಯಾಳಂ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್ ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತದೇಹವನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ನಟಿ ಸಂಜಿತ್ ಎಂಬುವರನ್ನು ವಿವಾಹವಾಗಿದ್ದು, ತ್ರಾಯಾ ಮತ್ತು ಕೃತಿಕಾ ಎಂಬ ಇಬ್ಬರು ಮಕ್ಕಳು ಸಹ ಇವರಿಗೆ ಇದ್ದಾರೆ. ಕರಮಾನ ಪೊಲೀಸರು ತನಿಖೆಯ ಹೊಣೆ ಹೊತ್ತಿದ್ದು, ತನಿಖೆ ಬಳಿಕವಷ್ಟೇ ನಟಿಯ ಸಾವಿಗೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.
ಅಪರ್ಣಾ ನಾಯರ್ ಅವರು ತಿರುವನಂತಪುರಂನಲ್ಲಿ ವಾಸವಾಗಿದ್ದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ಘಟನೆ ನಡೆದ ವೇಳೆ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಇದ್ದರು ಎಂದು ಹೇಳಲಾಗಿದೆ. ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ. ಮಗಳನ್ನು ಕಳೆದುಕೊಂಡ ಕಟುಂಬಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ : ಹಲವು ಅಪರಾಧ ಪ್ರಕರಣ ಬೇಧಿಸಿದ್ದ ಪೊಲೀಸ್ ಶ್ವಾನ ಕಾವ್ಯ ಇನ್ನಿಲ್ಲ
ಅಪರ್ಣಾ ನಿಧನಕ್ಕೆ ಸಂತಾಪ ಸೂಚಿಸಿದ ಅಭಿಮಾನಿಗಳು : ನಟಿಯ ನಿಧನವು ಕುಟುಂಬದವರಿಗೆ, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವು ಉಂಟು ಮಾಡಿದ್ದು, ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಜೊತೆಗೆ, ಚಿತ್ರರಂಗದ ಸಹೋದ್ಯೋಗಿಗಳು ಸಹ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ : ಹಾಸ್ಯನಟ ಶಿವರಾಜ್ ಕೆ. ಆರ್. ಪೇಟೆ ಅವರ ತಂದೆ ರಾಮೇಗೌಡ ವಿಧಿವಶ
2005 ರಲ್ಲಿ ಮಯೂಖಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಪರ್ಣಾ ನಾಯರ್, ಬಳಿಕ ರನ್ ಬೇಬಿ ರನ್, ಸೆಕೆಂಡ್ಸ್, ಅಚಾಯನ್ಸ್, ಮೇಘತೀರ್ಥಂ, ಮುದ್ದುಗೌ, ಕಾರ್ಟ್ ಸಮಕ್ಷಮ ಬಾಲನ್ ವಕೀಲ, ಕಲ್ಕಿ ಮುಂತಾದ ಹಲವು ಚಿತ್ರಗಳಲ್ಲಿ ಮತ್ತು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : Spandana funeral : ಪಂಚಭೂತಗಳಲ್ಲಿ ಸ್ಪಂದನಾ ಲೀನ ; ಕಣ್ಣೀರಿನ ವಿದಾಯ ಹೇಳಿಕ ಪತಿ ವಿಜಯ್ ರಾಘವೇಂದ್ರ