ಮೊಗ್ಗಿನ ಮೊನಸು ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಹಲವು ಸದಭಿರುಚಿ ಚಿತ್ರಗಳನ್ನು ನೀಡಿ ಕನ್ನಡಿಗರ ಮನಗೆದ್ದಿರುವ ನಿರ್ದೇಶಕ ಶಶಾಂಕ್ ಅವರು ಲವ್ ಮಾಕ್ಟೇಲ್ ನಟ ಖ್ಯಾತಿಯ ಡಾರ್ಲಿಂಗ್ ಕೃಷ್ಣಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ವಿಚಾರ ಗೊತ್ತೆ ಇದೆ. ಸದ್ಯ ಚಿತ್ರ ತಂಡ ಟೈಟಲ್ ಫಿಕ್ಸ್ ಮಾಡಿದ್ದು ಗಾಂಧಿ ನಗರದಲ್ಲಿ ಗಮನ ಸೆಳೆಯುತ್ತಿದೆ.
"ಕೌಸಲ್ಯಾ ಸುಪ್ರಜಾ ರಾಮ" ಎಂಬ ಸುಂದರ ಮತ್ತು ವಿಭಿನ್ನ ಶೀರ್ಷಿಕೆ ಇಡಲಾಗಿದ್ದು ಕುತೂಹಲ ಉಂಟುಮಾಡಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ನಿರ್ದೇಶಕ ಶಶಾಂಕ್ ಅವರು ತಮ್ಮ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡಿದರು.
![Shooting of Kausalya Supraja Rama Will Start Soon](https://etvbharatimages.akamaized.net/etvbharat/prod-images/kn-bng-02-kousalya-supraja-ramanadha-nata-kirshan-7204735_17102022093434_1710f_1665979474_414.jpg)
ಈ ಬಗ್ಗೆ ಮೊದಲು ಮಾತು ಶುರುಮಾಡಿದ ನಿರ್ದೇಶಕ ಶಶಾಂಕ್, "ಕೌಸಲ್ಯಾ ಸುಪ್ರಜಾ ರಾಮ" ನಾವು ದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲು. ಹೆಸರೆ ಹೇಳುವಂತೆ ಇದೊಂದು ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ. ಹಾಗಂತ ನಮ್ಮ ಚಿತ್ರದಲ್ಲಿ ಯಾವುದೇ ಮನೋರಂಜನೆಗೆ ಕೊರತೆಯಿಲ್ಲ. ಉತ್ತಮ ಮನೋರಂಜನೆ ಹಾಗೂ ಸೆಂಟಿಮೆಂಟ್ ಎರಡು ಇರುವ ಹಾಗೂ ಕುಟುಂಬ ಸಮೇತ ನೋಡಬಹುದಾದ ಚಿತ್ರ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿದ್ದು, ಅವರ ತಾಯಿ-ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ ಮತ್ತು ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಅಚ್ಯುತಕುಮಾರ್, ಗಿರಿರಾಜ್ ಸಹ ತಾರಾಬಳಗದಲ್ಲಿದ್ದಾರೆ.
![Shooting of Kausalya Supraja Rama Will Start Soon](https://etvbharatimages.akamaized.net/etvbharat/prod-images/kn-bng-02-kousalya-supraja-ramanadha-nata-kirshan-7204735_17102022093434_1710f_1665979474_266.jpg)
ಇಬ್ಬರು ನಾಯಕಿಯರಿರುತ್ತಾರೆ. ಅದರಲ್ಲಿ ಒಬ್ಬರು ಹೊಸಬರು. ಸದ್ಯದಲ್ಲೇ ನಾಯಕಿಯರ ಪರಿಚಯ ಮಾಡಿಸಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಐದು ಹಾಡುಗಳಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ನಮ್ಮ ಶಶಾಂಕ್ ಸಿನಿಮಾಸ್ ಹಾಗೂ ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಾನು ಬಿಸಿ ಪಾಟೀಲ್ ಅಭಿನಯದ "ಕೌರವ" ಚಿತ್ರದಲ್ಲಿ ಎಸ್ ಮಹೇಂದರ್ ಅವರ ಬಳಿ ಕೆಲಸ ಮಾಡಿದ್ದೆ. ಆಗಿನಿಂದಲೂ ಬಿಸಿ ಪಾಟೀಲ್ ಅವರ ಪರಿಚಯ. ಈಗ ಅವರ ಜೊತೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಅಂದರು.
![Shooting of Kausalya Supraja Rama Will Start Soon](https://etvbharatimages.akamaized.net/etvbharat/prod-images/kn-bng-02-kousalya-supraja-ramanadha-nata-kirshan-7204735_17102022093434_1710f_1665979474_266.jpg)
ನಂತರ ಕೃಷ್ಣ ಮಾತನಾಡಿ ಶಶಾಂಕ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಈಗ ಈಡೇರಿದೆ. "ಕೌಸಲ್ಯಾ ಸುಪ್ರಜಾ ರಾಮ" ಸುಂದರ ಶೀರ್ಷಿಕೆ. "ಲವ್ ಮಾಕ್ಟೇಲ್", "ಲಕ್ಕಿ ಮ್ಯಾನ್" ಸೇರಿದಂತೆ ನನ್ನ ಅನೇಕ ಚಿತ್ರಗಳ ಶೀರ್ಷಿಕೆ ಇಂಗ್ಲಿಷ್ನಲ್ಲಿದೆ. ಈಗ ಇಂಗ್ಲಿಷ್ ಇಲ್ಲದ ಶೀರ್ಷಿಕೆ ಸಿಕ್ಕಿದೆ. ಕಥೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದರು.
ನಾನು ನಿಮ್ಮ ಚಿತ್ರದಲ್ಲಿ ನಟಿಸಬೇಕೆಂದು ಶಶಾಂಕ್ ಅವರನ್ನು ಬಹಳ ದಿನಗಳಿಂದ ಕೇಳುತ್ತಿದೆ. ಈಗ ಅವಕಾಶ ಸಿಕ್ಕದೆ ಎಂದು ನಟ ಗಿರಿರಾಜ್ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ ಕಮಾಲ್ ... ಹೆಡ್ಬುಷ್ ಟ್ರೈಲರ್ಗೆ ಫ್ಯಾನ್ಸ್ ಫಿದಾ!