ಕನ್ನಡ ಚಿತ್ರರಂಗದ ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೇವಲ ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿದ್ದರು. ಅವರು ನಿಧನರಾಗಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸ್ಮರಣೆ ವಿವಿಧ ರೀತಿಯಲ್ಲಿ ನಡೆಯುತ್ತಿದೆ.
ಎರಡು ತಿಂಗಳ ಮಗುವಾಗಿದ್ದಾಗಲೇ ಪುನೀತ್ ರಾಜ್ಕುಮಾರ್ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. ದೊಡ್ಮನೆ ಮಗ ಪುನೀತ್ ಮನೋರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವ ಮೂಲಕ ಸೈ ಎನ್ನಿಸಿಕೊಂಡಿದ್ದರು.
![Puneeth rajkumar acted in films which gave message to society](https://etvbharatimages.akamaized.net/etvbharat/prod-images/16632048_newsss.jpg)
ಹೌದು, ವರನಟ ರಾಜ್ಕುಮಾರ್ ಹಾಕಿಕೊಟ್ಟ ಮಾರ್ಗವನ್ನು ಚಾಚೂ ತಪ್ಪದೇ ಪಾಲಿಸಿಕೊಂಡ ಬಂದ ಪುನೀತ್ ಅವರು ಅಪ್ಪನಂತೆ ಅಭಿಮಾನಿಗಳ ಮನಸ್ಸಿನಲ್ಲಿ ರಾಜರತ್ನನಾಗಿದ್ದಾರೆ. ಈ ಯುವರತ್ನ ಒಬ್ಬ ಕಮರ್ಷಿಯಲ್ ಹೀರೋ ಆಗಿ ಅಲ್ಲದೇ ಸಮಾಜಕ್ಕೆ ಏನಾದರು ಸಂದೇಶ ಕೊಡಬೇಕು ಅನ್ನೋ ಮಾರ್ಗದಲ್ಲಿ ನಡೆದವರು. ಈ ಮಾತಿಗೆ ಪೂರಕವಾಗಿ ಮೊದಲಿಗೆ ನೆನಪಿಗೆ ಬರೋ ಸಿನಿಮಾ ಅಂದ್ರೆ ಅದು ಗಂಧದ ಗುಡಿ ಸಿನಿಮಾ.
![Puneeth rajkumar acted in films which gave message to society](https://etvbharatimages.akamaized.net/etvbharat/prod-images/16632048_news.jpg)
ನಿರ್ದೇಶಕ ಅಮೋಘವರ್ಷ ಹೇಳುವ ಹಾಗೆ, ಈ ಸಿನಿಮಾ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡುವ ಚಿತ್ರ. ಇದು ಅಪ್ಪು ಸರ್ ಕನಸು ಕೂಡ ಹೌದು. ನಮ್ಮ ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ಬಗ್ಗೆ ಪುಸ್ತಕದಲ್ಲಿ ನೋಡುವ ಕಾಲ ಬರುತ್ತಿದೆ. ಈ ಕಾರಣಕ್ಕೆ ಅಪ್ಪು ಸರ್ ಈ ಗಂಧದ ಗುಡಿ ಸಿನಿಮಾವನ್ನು ಮಾಡಿದ್ದು ಅಂತಾರೆ ನಿರ್ದೇಶಕ ಅಮೋಘವರ್ಷ. ಈ ಚಿತ್ರದಲ್ಲಿ ನಮ್ಮ ಪ್ರಾಕೃತಿಕ ಸಂಪತ್ತಿನ ವೈಭವೀಕರಣ ಆಗಿದೆ.
![Puneeth rajkumar acted in films which gave message to society](https://etvbharatimages.akamaized.net/etvbharat/prod-images/16632048_dbjfbvher.jpg)
ಇನ್ನು, ಈ ಸಿನಿಮಾಗೂ ಮುನ್ನ ಪುನೀತ್ ರಾಜ್ಕುಮಾರ್ ಎಂಟರ್ಟೈನ್ಮೆಂಟ್ ಜೊತೆಗೆ ಸಾಮಾಜಿಕ ಸಂದೇಶ ಇರುವ ಸಿನಿಮಾಗಳನ್ನು ಮಾಡಿದ್ದಾರೆ. ಅದುವೇ ಪೃಥ್ವಿ ಸಿನಿಮಾ. ನಮ್ಮ ನಾಡಿನಲ್ಲಿ ನಡೆದ ಗಣಿಗಾರಿಕೆ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಚಿತ್ರದಲ್ಲಿ ಖಡಕ್ ನಿಷ್ಠಾವಂತ ಡಿಸಿಯಾಗಿ ಅಭಿನಯಿಸುವ ಮೂಲಕ ಸಮಾಜಕ್ಕೆ ಸಂದೇಶ ಕೊಟ್ಟಿದ್ದರು. ಈ ಚಿತ್ರ ಬಿಡುಗಡೆ ಆದಾಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಆಗಿತ್ತು. ಈ ಸಿನಿಮಾವನ್ನು ಜೇಕಬ್ ವರ್ಗೀಸ್ ನಿರ್ದೇಶನ ಮಾಡಿದ್ದರು.
![Puneeth rajkumar acted in films which gave message to society](https://etvbharatimages.akamaized.net/etvbharat/prod-images/16632048_nnnn.jpg)
ಇದರ ಜೊತೆಗೆ 2015ರಲ್ಲಿ ಬಂದ ಮೈತ್ರಿ ಸಿನಿಮಾ. ನಿರ್ದೇಶಕ ಗಿರಿರಾಜ್ ನಿರ್ದೇಶನ ಮಾಡುವ ಮೂಲಕ ಮೊದಲ ಬಾರಿಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಒಬ್ಬ ಸ್ಟಾರ್ ಆಗಿ ಗಮನ ಸೆಳೆದಿದ್ದರು. ಕೆಳಮಟ್ಟದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಲುಕಿ, ಪರಿಸ್ಥಿತಿಯ ದಾಳಕ್ಕೆ ಬಲಿಯಾಗಿ ರಿಮ್ಯಾಂಡ್ ಹೋಮ್ ಸೇರಿರುವನ ಕಥೆಯಾಗಿತ್ತು.
2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಆದ ರಾಜಕುಮಾರ ಸಿನಿಮಾ. ಈ ಸಿನಿಮಾ ಪುನೀತ್ ರಾಜ್ ಕುಮಾರ್ ಸಿನಿ ಜರ್ನಿಯಲ್ಲಿ ಮೈಲ್ ಸ್ಟೋನ್ ಚಿತ್ರವಾಗಿತ್ತು. ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಸಿನಿಮಾ ಹೆತ್ತ ತಂದೆ-ತಾಯಿಯನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸಬೇಡಿ ಎಂಬ ಸಂದೇಶವನ್ನು ಹೊಂದಿತ್ತು. ಈ ಸಿನಿಮಾ ನೂರು ದಿನ ಯಶಸ್ವಿ ಪ್ರದರ್ಶನಗೊಂಡು ಸಮಾಜದ ಬದಲಾವಣೆಗೆ ಕಾರಣವಾಯಿತು.
ಇನ್ನು, ಶಿಕ್ಷಣ ವ್ಯವಸ್ಥೆ ಬಗ್ಗೆ ದೊಡ್ಡ ಮಟ್ಟದಲ್ಲಿ ಬೆಳಕು ಚೆಲ್ಲಿದ ಸಿನಿಮಾ ಯುವರತ್ನ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಪಾಠ ಹೇಳುವ ಗುರುವಿನ ಪಾತ್ರದಲ್ಲಿ ಅಭಿಮಾನಿಗಳಿಗೆ ಇಷ್ಟ ಆದರು. ಈ ಸಿನಿಮಾ ಸದ್ಯದ ಎಜುಕೇಷನ್ ಸಿಸ್ಟಮ್ ಬಗ್ಗೆ ಬೊಟ್ಟು ಮಾಡಿ ತೋರಿಸುವ ಕಥೆಯಾಗಿತ್ತು.
ಇದನ್ನೂ ಓದಿ: ಪುನೀತ್ ಪರ್ವ ಕಾರ್ಯಕ್ರಮಕ್ಕೆ ರಾಜ್ ಕುಟುಂಬದಿಂದ ಸಿಎಂಗೆ ಆಹ್ವಾನ
ಒಟ್ಟಾರೆ ಪವರ್ ಸ್ಟಾರ್ ಬಾಲ್ಯ ಹಾಗು ಪೂರ್ಣ ಪ್ರಮಾಣದ ನಾಯಕನಾಗಿ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿಯಿಸಿದ್ದಾರೆ. ಅದರಲ್ಲಿ ಪುನೀತ್ ರಾಜ್ಕುಮಾರ್ ತಮ್ಮ ಆಸೆಯಂತೆ ಸಮಾಜಕ್ಕೆ ಸಂದೇಶ ಕೊಡುವ ಚಿತ್ರಗಳನ್ನು ಸಹ ಮಾಡಿದ್ದಾರೆ ಅನ್ನೋದಿಕ್ಕೆ ಈ ಚಿತ್ರಗಳೇ ಉತ್ತಮ ಉದಾಹರಣೆ.