ಚಾಮರಾಜನಗರ: ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಪಿಆರ್ಎಫ್ ಫೌಂಡೇಶನ್ ಮೂಲಕ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಟ್ಟಿದ್ದಾರೆ.
ಹೋಲಿಕ್ರಾಸ್ ಆಸ್ಪತ್ರೆ ಆರೋಗ್ಯ ಸೇವೆ: ಚಾಮರಾಜನಗರ ಜಿಲ್ಲೆಯ ಕಿಚ್ಚಗುತ್ತಿ ಮಾರಮ್ಮನ ದೇವಾಲಯದ ವಿಷ ಪ್ರಸಾದ ದುರಂತ ಸಮಯದಲ್ಲಿ ಗಣನೀಯ ಆರೋಗ್ಯ ಸೇವೆಯನ್ನು ಹೋಲಿಕ್ರಾಸ್ ಆಸ್ಪತ್ರೆ ಕೊಟ್ಟಿದೆ. ಗುಡ್ಡಗಾಡು ಪ್ರದೇಶಗಳಿಗೆ ಅನುಕೂಲವಾಗಲೆಂದು ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಡಲಾಗುತ್ತಿದೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಕಾಡಂಚಿನ ಜನರಿಗೆ ಸೇವೆ ಲಭ್ಯ: ನಮ್ಮ ಆಸ್ಪತ್ರೆಯ ಸೇವೆ ಗುರುತಿಸಿ ಇಂದು ನೀಡಿರುವ ತುರ್ತು ವಾಹನದ ಸದುಪಯೋಗ ಕಾಡಂಚಿನ ಗುಡ್ಡ ಪ್ರದೇಶದ ಜನರಿಗೆ ಸಿಗಲಿದೆ. ಜೊತೆಗೆ ಈ ತುರ್ತು ವಾಹನ ನೀಡಿದ ಪ್ರಕಾಶ್ ರೈ ಅವರಿಗೆ ಅಭಿನಂದನೆಗಳು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೆಲಿನಾ ಅಭಿನಂದನೆ ಸಲ್ಲಿಸಿದ್ದಾರೆ. ಆಂಬ್ಯುಲೆನ್ಸ್ ಹಸ್ತಾಂತರ ಬೆಂಗಳೂರಿನಲ್ಲಿ ನಡೆದಿದ್ದು, ಅರಣ್ಯ ಪ್ರದೇಶಕ್ಕೆ ಅನೂಕುಲವಾಗಲೆಂದು 4x4 ಫೋರ್ಸ್ ವಾಹನ ಕೊಡಲಾಗಿದೆ.

ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್: ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ರಾಜ್ಯದ ಪ್ರತೀ ಜಿಲ್ಲೆಗಳಿಗೂ ಉಚಿತ ಆಂಬ್ಯುಲೆನ್ಸ್ ನೀಡುವ ಕಾರ್ಯವನ್ನು ಪಿಆರ್ಎಫ್ ಫೌಂಡೇಶನ್ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ದಿ. ನಟ ಪುನೀತ್ ರಾಜ್ಕುಮಾರ್ ಅವರ ಸಮಾಜ ಸೇವೆ, ಮಾನವೀಯತೆಯ ಕೆಲಸವೇ ಸ್ಫೂರ್ತಿ ಎಂದು ಈ ಹಿಂದೆ ನಟ ಪ್ರಕಾಶ್ ರಾಜ್ ತಿಳಿಸಿದ್ದರು.
ಇದನ್ನೂ ಓದಿ: ಜಾಕ್ವೆಲಿನ್ ವಿರುದ್ಧ ನೋರಾ ಮಾನನಷ್ಟ ಮೊಕದ್ದಮೆ: ಮೇ 22ಕ್ಕೆ ವಿಚಾರಣೆ ಮುಂದೂಡಿಕೆ
ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗಬೇಕು.. ಪುನೀತ್ ರಾಜ್ಕುಮಾರ್ ಅವರ ಜೊತೆ ಕೇವಲ ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಅವರ ಜೊತೆ ಉತ್ತಮ ಒಡನಾಟ ಇತ್ತು. ಕೋವಿಡ್ ಸಂದರ್ಭದಲ್ಲಿ ನನಗೆ ಅವರು ದೇಣಿಗೆ ರೂಪದಲ್ಲಿ ಸಹಾಯ ಮಾಡಿದ್ದರು. ಆಂಬ್ಯುಲೆನ್ಸ್ ಕೊಡಲು ಪ್ರಮುಖ ಕಾರಣವೆಂದರೆ, ಪುನೀತ್ ಅವರಿಗೆ ಸಕಾಲದಲ್ಲಿ ಆಂಬ್ಯುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರೇನೋ ಎಂಬ ಮಾತು ಕೇಳಿ ಬರುತ್ತಿದ್ದು, ಇಂತಹ ಸ್ಥಿತಿ ಬಡ ಜನರಿಗೆ ಬರಬಾರದು ಎಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಆಂಬ್ಯುಲೆನ್ಸ್ ನೀಡಲಾಗುತ್ತಿದೆ ಎಂದು ಸಹ ಹೇಳಿದ್ದರು.
ಇದನ್ನೂ ಓದಿ: ಕನ್ನಡತಿ ಶ್ರೀಲೀಲಾಗೆ ಆಫರ್ ಮೇಲೆ ಆಫರ್.. ಟಾಲಿವುಡ್ ಸಿನಿ ನೆಲದಲ್ಲಿ ಬ್ಯುಸಿಯಾದ 'ಕಿಸ್' ತಾರೆ
ಅಪ್ಪು ಸಮಾಜ ಸೇವೆಯನ್ನು ನಾವು ಮುಂದುವರಿಸಬೇಕು.. ದಿ. ನಟ ಪುನೀತ್ ರಾಜ್ಕುಮಾರ್ ಕಿರಿ ವಯಸ್ಸಿನಲ್ಲಿ ಮಾಡಿದ ಕೆಲಸ ದೊಡ್ಡದು. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. ಅವರು ನಮ್ಮಲ್ಲಿ ಜೀವಂತಾಗಿ ಇರಬೇಕಾದರೆ, ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ಸ್ಮರಿಸುತ್ತ ಕೂರದೇ ಅವುಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಆ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಿಗೂ ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್ ನೀಡಲು ಮುಂದಾಗಿದ್ದೇವೆ ಎಂದು ಸಹ ಈ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ: 'ವೀಕೆಂಡ್ ವಿತ್ ರಮೇಶ್ ಶೋ'ಗೆ ಕಾತರ: ಮೋಹಕತಾರೆ ರಮ್ಯಾ ಬಗ್ಗೆ ಪೂಜಾ ಗಾಂಧಿ ಗುಣಗಾನ