ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ 'ಮತ್ತೆ ಮದುವೆ' ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದೇ ಮೇ. 26ರಂದು ಚಿತ್ರ ತೆರೆ ಕಾಣಲು ಸಜ್ಜಾಗಿದೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಜೋಡಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
'ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ': ಇದು ನಿಮ್ಮ ಜೀವನದ ರಿಯಲ್ ಲೈಫ್ ಸ್ಟೋರಿನಾ? ಟೀಸರ್ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟಿ ಪವಿತ್ರಾ ಲೋಕೇಶ್, ''ಒಂದೆರಡು ನಿಮಿಷದ ಟೀಸರ್, ಟ್ರೇಲರ್ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ. ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ" ಎಂದು ತಿಳಿಸಿದರು.
![Naresh revealed his relationship with Pavitra Lokesh](https://etvbharatimages.akamaized.net/etvbharat/prod-images/18532340_dtgf4wehjfe.jpg)
'ನನ್ನ ಹೆಗಲ ಮೇಲಿತ್ತು ಗನ್, ನರೇಶ್ ಅವರೇ ಗುರಿ': "ನನ್ನ ವೃತ್ತಿಗೂ, ವೈಯಕ್ತಿಕ ವಿಚಾರಕ್ಕೂ ಲಿಂಕ್ ಮಾಡುವುದು ನನಗೆ ಇಷ್ಟವಿಲ್ಲ. ನನ್ನನ್ನು ಒಬ್ಬ ನಟಿಯಾಗಿ ಮಾತ್ರ ನೋಡಿ, ಬೇಕಂತಲೇ ಯಾರೂ ಸುದ್ದಿಯಾಗುವುದಿಲ್ಲ. 1994ನಲ್ಲಿ ಅಂಬರೀಶ್ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಇದುವರೆಗೂ ನಾನು ಯಾವುದೇ ವಿಚಾರವನ್ನು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿರಲಿಲ್ಲ. ದುರುದ್ದೇಶಪೂರ್ವಕವಾಗಿ ನನ್ನ ಹೆಗಲ ಮೇಲೆ ಗನ್ ಇಟ್ಟು ನರೇಶ್ ಅವರನ್ನು ಶೂಟ್ ಮಾಡುವ ಪಿತೂರಿ ನಡೆದಿತ್ತು" ಎಂದು ಪವಿತ್ರಾ ಹೇಳಿದರು.
ಇದನ್ನೂ ಓದಿ: ಪ್ಯಾರಿಸ್ ಪ್ರವಾಸದಲ್ಲಿ 'ಲವ್ ಮಾಕ್ಟೇಲ್' ಜೋಡಿ: ಐಫೆಲ್ ಟವರ್ ಎದುರು ನಿಂತು ಹೇಗೆ ಕಾಣ್ತಾರೆ ನೋಡಿ..
ತೆಲುಗು ನಟ ನರೇಶ್ ಮಾತನಾಡಿ, "ಈ ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂ ಕೋರ್ಟ್ ಲಿವ್ ಇನ್ ರಿಲೇಶನ್ಶಿಪ್ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತಹದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ?. ನಾನಂತೂ ಸಿಂಗಲ್ ಅಲ್ಲ. ಪವಿತ್ರಾ ಹಾಗೂ ನಾನು ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದೇವೆ" ಎಂದು ಬಹಿರಂಗವಾಗಿ ಒಪ್ಪಿಕೊಂಡರು.
![Naresh revealed his relationship with Pavitra Lokesh](https://etvbharatimages.akamaized.net/etvbharat/prod-images/18532340_dfgtbserhg.jpg)
ಇದನ್ನೂ ಓದಿ: 'ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಹೆಚ್ಚು ಸೂಕ್ತ': ಐಶ್ವರ್ಯಾ ರಾಜೇಶ್
ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ಚಿತ್ರವನ್ನು ನರೇಶ್ ನಿರ್ಮಾಣ ಮಾಡಿದ್ದಾರೆ. ಎಂ.ಎಸ್ ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.