ನಗುಮೊಗದ ಒಡೆಯ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಹಲವು ದಿನಗಳೇ ಉರುಳಿವೆ. ಆದ್ರೆ ಅವರ ನೆನಪುಗಳು ಮಾತ್ರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಎರಡು ತಿಂಗಳ ಮಗುವಾಗಿದ್ದಾಗಲೇ ಸಿನಿಮಾ ಲೋಕ ಪ್ರವೇಶಿಸಿದ ಅಪ್ಪು ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು.
ಕೇವಲ ರಂಜನೆ ಮಾತ್ರವಲ್ಲ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಸಿನಿಮಾಗಳ ಹೊರತಾಗಿ ನಿಜಜೀವನದಲ್ಲೂ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು. ಸಮಾಜಮುಖಿ ನಾಯಕನಾಗಿ ಹೊರಹೊಮ್ಮಿದ್ದರು. ಇಂದಿಗೂ ಆ ಪುಣ್ಯ ಕಾರ್ಯಗಳು ಅವರ ಕುಟುಂಬಸ್ಥರಿಂದ ಮುಂದುವರಿದಿದೆ.
![puneeth rajkumar](https://etvbharatimages.akamaized.net/etvbharat/prod-images/18003038_newss.jpg)
ತಂದೆ, ವರನಟ ಡಾ.ರಾಜ್ಕುಮಾರ್ ಅವರ ಆದರ್ಶದ ಹಾದಿಯಲ್ಲೇ ಅಪ್ಪು ಹೆಜ್ಜೆ ಹಾಕಿದವರು. ಚಲನಚಿತ್ರಗಳಲ್ಲಿ ನಟನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕೆಲಸವನ್ನು ಸಿನಿಮಾಗಳ ಮೂಲಕ ಮಾಡುತ್ತಿದ್ದರು. ಅವರ ಹೆಚ್ಚಿನ ಸಿನಿಮಾಗಳಲ್ಲಿ ಈ ವಿಚಾರವನ್ನು ನಾವು ಕಾಣಬಹುದು.
2015ರಲ್ಲಿ ಬಂದ ಮೈತ್ರಿ ಚಿತ್ರ ಸಮಾಜಮುಖಿ ಸಿನಿಮಾಗಳಲ್ಲೊಂದು. ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿ ಅಪ್ಪು ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡತನದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಲುಕಿ, ರಿಮ್ಯಾಂಡ್ ಹೋಮ್ ಸೇರಿರುವನ ಕಥೆ ಅದು.
2017ರಲ್ಲಿ ತೆರೆಕಂಡ ರಾಜಕುಮಾರ ಚಿತ್ರವೂ ಸಮಾಜಮುಖಿಯೇ ಇದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಪೋಷಕರನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸುವ ಕಥಾನಕ ಹೊಂದಿತ್ತು. ಹೆತ್ತು ಹೊತ್ತವರನ್ನು ಅನಾಥಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಹೊಂದಿದ್ದ ಚಿತ್ರ ಸೂಪರ್ ಹಿಟ್ ಆಗಿತ್ತು.
![puneeth rajkumar](https://etvbharatimages.akamaized.net/etvbharat/prod-images/18003038_newssssss.jpg)
ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ ಸಿನಿಮಾ 'ಯುವರತ್ನ'. ವಿದ್ಯಾರ್ಥಿಗಳಿಗೆ ಪೂರೈಕೆ ಆಗುತ್ತಿದ್ದ ಡ್ರಗ್ಸ್ ಕುರಿತು ಸಿನಿಮಾ ಮಾತನಾಡಿತ್ತು. ಸರ್ಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಾಧರಿಸಿ ನಿರ್ಮಿಸಿದ ಚಿತ್ರವಿದು. ಶಿಕ್ಷಕನ ಪಾತ್ರದಲ್ಲಿ ಅಪ್ಪು ಮನೋಜ್ಞವಾಗಿ ಅಭಿನಯಿಸಿದ್ದರು.
ಅಪ್ಪು ಮೊದಲ ಬಾರಿ ಐಎಎಸ್ ಅಧಿಕಾರಿಯಾಗಿ ನಟಿಸಿದ್ದ ಚಿತ್ರ 'ಪೃಥ್ವಿ'. ಬಳ್ಳಾರಿ ಗಣಿದಣಿಗಳ ವಿರುದ್ಧ ಹೋರಾಟ ನಡೆಸುವ ಅಧಿಕಾರಿಯ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು. ವಿಪರೀತ ಬಿಸಿಲು, ದೂಳಿನಿಂದ ಕೂಡಿದ ವಾತಾವರಣ, ಎಲ್ಲೆಲ್ಲೂ ಜೆಸಿಬಿ, ಲಾರಿಗಳ ಓಡಾಟ, ಚಾಲಕರ ದರ್ಪ, ರಾಜಕಾರಣಿಗಳ ಮದವೇರಿದ ಮಾತು ಇಂಥ ವಾತಾವರಣದಲ್ಲಿ ನ್ಯಾಯಕ್ಕಾಗಿ ಹೋರಾಡುವ ಜಿಲ್ಲಾಧಿಕಾರಿ ಎದುರಿಸುವ ಸಂಕಟ ಎಲ್ಲವೂ ಚಿತ್ರದಲ್ಲಿ ಅನಾವರಣಗೊಂಡಿದೆ. ವೃತ್ತಿಜೀವನದ ಆರಂಭದಲ್ಲಿ ಅಭಿನಯಿಸಿದ 'ಆಕಾಶ್' ಕೂಡ ಸಾಮಾಜಿಕ ಸಂದೇಶ ಹೊತ್ತು ಬಂದಿತ್ತು.
ಇದನ್ನೂ ಓದಿ: ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್ಕುಮಾರ್
ನಾಯಕ ನಟನಾಗಿ ಅಪ್ಪು ಕೊನೆಯದಾಗಿ ಅಭಿನಯಿಸಿದ ಚಿತ್ರವೇ 'ಜೇಮ್ಸ್'. ಜೆ.ವಿಂಗ್ಸ್ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿನ ಪವರ್ಫುಲ್ ವ್ಯಕ್ತಿ ಸಂತೋಶ್ (ಪುನೀತ್ ರಾಜ್ಕುಮಾರ್) ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ಗ್ಯಾಂಗ್ಸ್ಟರ್ ಒಬ್ಬನಿಗೆ ಭದ್ರತೆ ಒದಗಿಸಲು ನೇಮಕವಾಗುತ್ತಾನೆ. ಅವನ ಕೆಲಸ ಭದ್ರತೆ ನೀಡುವುದಷ್ಟೇ. ಆದ್ರೆ ಡ್ರಗ್ಸ್ ಮಾಫಿಯಾ ದಂಧೆಯನ್ನು ಹೇಗೆ ನಿರ್ನಾಮ ಮಾಡುತ್ತಾನೆ ಎಂಬುದು ಕಥೆ.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ 'ಕಾಂತಾರ' ರಿಷಬ್ ಶೆಟ್ಟಿ!
ಗಂಧದ ಗುಡಿ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ. ಕರುನಾಡಿನ ಅರಣ್ಯ ಸೌಂದರ್ಯ, ವನ್ಯಜೀವಿ, ಪ್ರಾಕೃತಿಕ ಸಂಪತ್ತನ್ನು ಬಿಂಬಿಸಿದ ಪುನೀತ್ ರಾಜ್ಕುಮಾರ್ ಕೊನೆಯ ಸಾಕ್ಷ್ಯ ಚಿತ್ರವಿದು. ಹೀಗೆ ಮನರಂಜನೆಯ ಜೊತೆಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ ಮೂಲಕ ಈಗಲೂ ಅಭಿಮಾನಿಗಳ ಮನದಲ್ಲಿ ನಾಯಕನಾಗಿಯೇ ಉಳಿದುಕೊಂಡಿದ್ದಾರೆ.