ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ನಿರ್ದೇಶಕ. ಅವರು ಬದುಕಿದ್ದರೆ ಇಂದು 68ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಸಣ್ಣ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದವರು. ಆ ಅವಧಿಯಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಸಂಪಾದಿಸಿದರು. ಇಂದಿಗೂ ಶಂಕ್ರಣ್ಣ ಅಂದ್ರೆ ಬಲು ಅಚ್ಚುಮೆಚ್ಚು ಎನ್ನುವ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಇಹಲೋಕ ತ್ಯಜಿಸಿ 32 ವರ್ಷವಾಗಿದ್ದು, ಅವರನ್ನು ಸ್ಮರಿಸುವ ಕೆಲಸ ಆಗುತ್ತಿದೆ.
ಹಿನ್ನೆಲೆ: ಶಂಕರ್ ನಾಗ್.. ಹೆಸರು ಕೇಳಿದೊಡನೆ ಕನ್ನಡ ಸಿನಿಮಾ ಪ್ರಿಯರಿಗೆ ಒಂದು ರೀತಿಯ ಭಕ್ತಿ, ಗೌರವ. ಆ್ಯಕ್ಟಿಂಗ್ನಲ್ಲಿ ವಿಭಿನ್ನ ಮ್ಯಾನರಿಸಂ, ನಿರ್ದೇಶನದಲ್ಲಿ ಸದಾ ಕ್ರಿಯಾಶೀಲತೆ ತೋರುತ್ತಿದ್ರು ಶಂಕ್ರಣ್ಣ. ಆಟೋ ಚಾಲಕರ ಪ್ರೀತಿಯ ಆಟೋರಾಜ, ಕರಾಟೆ ಕಿಂಗ್ ಶಂಕರ್ ನಾಗ್ ಅವರು 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ನಟನೆ ಆರಂಭಿಸಿ ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದರು. ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದರು.
![late actor Shankar Nag Birthday](https://etvbharatimages.akamaized.net/etvbharat/prod-images/16877747_thumbnssdfail.jpg)
ನಾಗರಕಟ್ಟೆ ಶಂಕರ್ ಅನ್ನೋದು ಶಂಕರ್ ನಾಗ್ ಮೂಲ ಹೆಸರು. 1954ರ ನವೆಂಬರ್ 9ಕ್ಕೆ ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಬಹಳ ಚುರುಕಾಗಿದ್ದ ಅವರನ್ನು ಅವರ ತಂದೆ ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್ ನಾಗ್ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
![late actor Shankar Nag Birthday](https://etvbharatimages.akamaized.net/etvbharat/prod-images/16877747_thumbnail.jpg)
ಶಂಕರ್ನಾಗ್ ಸಿನಿಪಯಣ: ಗಿರೀಶ್ ಕಾರ್ನಾಡ್ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ದೊರೆಯಿತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಶಂಕರ್ ನಾಗ್ಗೆ ಒಂದರ ಹಿಂದೊಂದರಂತೆ ಸಿನಿಮಾಗಳ ಆಫರ್ ಬಂದವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡ ಶಂಕರ್ ನಾಗ್ ಬಳಿಕ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಾಣ ಮಾಡಿದರು.
![late actor Shankar Nag Birthday](https://etvbharatimages.akamaized.net/etvbharat/prod-images/16877747_thumdtfgerbnail.jpg)
ಆರ್.ಕೆ. ನಾರಾಯಣನ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ನಾಗ್ ಈ ಧಾರಾವಾಹಿ ಮೂಲಕ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. 1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಪ್ರಸಾರವಾಯ್ತು.
ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರನ್ನು ಪ್ರೀತಿಸಿ ಮದುವೆಯಾದ ಶಂಕರ್ ನಾಗ್, ಪತ್ನಿಯೊಂದಿಗೆ ಸೇರಿ 'ಸಂಕೇತ್' ಎಂಬ ಹವ್ಯಾಸಿ ರಂಗಭೂಮಿ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ದಂಪತಿಗೆ ಕಾವ್ಯ ಎಂಬ ಪುತ್ರಿ ಇದ್ದಾರೆ. ಶಂಕರ್ ನಾಗ್ ನಿಧನದ ನಂತರ ಅರುಂಧತಿ ನಾಗ್ 'ರಂಗಶಂಕರ' ಎಂಬ ರಂಗಮಂದಿರವನ್ನು ಸ್ಥಾಪಿಸಿದರು.
ನಿಗೂಢ ರಹಸ್ಯ: ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ 'ನಿಗೂಢ ರಹಸ್ಯ'. ಕನ್ನಡ ಚಿತ್ರರಂಗದ ಅಭಿವೃದ್ಧಿ ಬಗ್ಗೆ ದೊಡ್ಡ ಮಟ್ಟಿನ ಕನಸು ಕಂಡಿದ್ದ ಶಂಕರ್ ನಾಗ್ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲೇ ನಿಧನರಾದರು. 30 ಸೆಪ್ಟೆಂಬರ್ 1990 ದಾವಣಗೆರೆ ಬಳಿ ಶಂಕರ್ ನಾಗ್ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ ಕೊನೆಯುಸಿರೆಳೆದರು.
ಇದನ್ನೂ ಓದಿ: ತನ್ನನ್ನು ದ್ವೇಷಿಸುವವರ ಬಗ್ಗೆ ಮನಸ್ಸು ಮುರಿದುಕೊಂಡ ರಶ್ಮಿಕಾ ಮಂದಣ್ಣ: ಹೇಳಿದ್ದೇನು ಗೊತ್ತೇ?
'ಆಟೋರಾಜ' ಚಿತ್ರದ ಮೂಲಕ ಶಂಕರ್ ನಾಗ್ ಆಟೋ ಚಾಲಕರ ಮೆಚ್ಚಿನ ನಟನಾದರು. ಇಂದಿಗೂ ಕೂಡಾ ಬಹುತೇಕ ಆಟೋಗಳಲ್ಲಿ ಶಂಕರ್ ನಾಗ್ ಫೋಟೋಗಳನ್ನು ಕಾಣಬಹುದು.
ಸಾಂಗ್ಲಿಯಾನ 2 ರೀ ರಿಲೀಸ್: ಶಂಕರ್ ನಾಗ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾಗಳಲ್ಲಿ ಸಾಂಗ್ಲಿಯಾನ ಸಹ ಒಂದು. ಅದೇ ಚಿತ್ರದ ಸೀಕ್ವೆಲ್ ಸಾಂಗ್ಲಿಯಾನ 2. ಈ ಸಿನಿಮಾ ಮತ್ತೊಮ್ಮೆ ತೆರೆ ಕಾಣುತ್ತಿದೆ. 1990ರಲ್ಲಿ ಬಿಡುಗಡೆಯಾಗಿದ್ದ ಸಾಂಗ್ಲಿಯಾನ 2 ಚಿತ್ರದಲ್ಲಿ ಭವ್ಯಾ ನಾಯಕಿಯಾಗಿ ಅಭಿನಯಿಸಿದ್ದರು.